ಏ.5ರಿಂದ ದೆಹಲಿಯಲ್ಲಿ ರಾಷ್ಟ್ರೀಯ ಕನ್ನಡ ಸಮ್ಮೇಳನ
ನವದೆಹಲಿ : ಏಪ್ರಿಲ್ 5 ಮತ್ತು 6ನೇ ತಾರೀಕು ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ 20ನೇ ರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ಅದ್ಧೂರಿಯ ಸಿದ್ಧತೆ ನಡೆದಿದೆ.
ಸಮ್ಮೇಳನದ ಸಂಚಾಲಕ ಬಾ.ಸಾಮಗ ಸುದ್ದಿ ಹೇಳಿಕೆಯಲ್ಲಿ ಸಮ್ಮೇಳನದ ಸಿದ್ಧತೆಗಳನ್ನು ತೆರೆದಿಟ್ಟಿದ್ದಾರೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಕುಲಪತಿ ಪ್ರೊ. ಬಿ. ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಲಿರುವ ಈ ಸಮ್ಮೇಳನವನ್ನು ಕರ್ನಾಟಕದ ಸಚಿವ ಬಾಬುರಾವ್ ಚವ್ಹಾಣ್ ಉದ್ಘಾಟಿಸುವರು. ಸಮ್ಮೇಳನಕ್ಕೆ ದೇಶದ ವಿವಿಧೆಡೆಗಳಿಂದ ಬರಲಿರುವ ಅತಿಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಸಲುವಾಗಿ ಬೆಂಗಳೂರಿನಿಂದ ದೆಹಲಿಗೆ ವಿಶೇಷ ರೈಲು ಓಡಿಸಬೇಕೆಂದು ಸರ್ಕಾರವನ್ನು ಕೋರಲಾಗಿದೆ ಎಂದು ಸಾಮಗ ಹೇಳಿದರು.
ಕೆಂಪುಕೋಟೆಯಿಂದ ಕರ್ನಾಟಕ ಭವನದವರೆಗೆ ಕನ್ನಡಿಗರ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿದ್ದು, ಅದರಲ್ಲಿ ಕರ್ನಾಟಕ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಸಂಗೀತ, ನೃತ್ಯ, ಜಾನಪದ ತಂಡಗಳು ಭಾಗವಹಿಸಲಿವೆ. ದೆಹಲಿಯ ಬೀದಿಬೀದಿಗಳಲ್ಲಿ ಕನ್ನಡ ಪರ ಘೋಷಣೆಗಳನ್ನು ಬರೆಯಲಾಗಿದೆ. ಸಮ್ಮೇಳನ ಕುರಿತ ಭಿತ್ತಿಪತ್ರಗಳನ್ನೂ ಹಂಚಲಾಗಿದೆ. ಕರ್ನಾಟಕ ಭವನದಲ್ಲಿ ಸಮ್ಮೇಳನ ನಡೆಯಲಿದ್ದು, ಆ ಜಾಗವನ್ನು ಸಿಂಗರಿಸಲಾಗಿದೆ. ಕರ್ನಾಟಕ ಹಾಗೂ ಉತ್ತರ ಭಾರತದ ತಿನಿಸುಗಳನ್ನು ಉಣಬಡಿಸುವುದು ಸಮ್ಮೇಳನದ ವಿಶೇಷಗಳಲ್ಲೊಂದು. ದೆಹಲಿ ಕನ್ನಡಿಗ ಪತ್ರಿಕೆಯ ಆಶ್ರಯದಲ್ಲಿ ಇಂಥಾ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...