ಕಾಶ್ಮೀರ ಶಾಂತಿ ಸ್ವರ್ಗ, ಬನ್ನಿ ಬಂಡವಾಳ ಹೂಡಿ- ಮುಫ್ತಿ
*ನಮ್ಮ ಪ್ರತಿನಿಧಿಯಿಂದ
ಬೆಂಗಳೂರು : ‘ಜಮ್ಮು ಮತ್ತು ಕಾಶ್ಮೀರ ಸುರಕ್ಷಿತ ಸ್ವರ್ಗ. ಕಾಶ್ಮೀರದಲ್ಲಿ ಬಂಡವಾಳ ಹೂಡುವುದೆಂದರೆ ಶಾಂತಿಧಾಮದಲ್ಲಿ ದುಡ್ಡು ಹೂಡಿದಷ್ಟು ನಿರಾಳ. ಬನ್ನಿ, ಬಂಡವಾಳ ಹೂಡಿ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ನಗರದಲ್ಲಿ ನೆರೆದಿದ್ದ ಒಂದು ಹಿಡಿ ಉದ್ದಿಮೆದಾರರಿಗೆ ಕರೆ ಕೊಟ್ಟರು.
ಮುಂಬಯಿ, ಹೈದರಾಬಾದ್ ಮತ್ತು ಸಿಲಿಕಾನ್ ನಗರಿ ಬೆಂಗಳೂರಿನ ಉದ್ದಿಮೆದಾರರಿಗೆ ಜಮ್ಮು ಮತ್ತು ಕಾಶ್ಮೀರದ ಬಂಡವಾಳ ಹೂಡಿಕೆಯ ಅವಕಾಶಗಳನ್ನು ತೆರೆದಿಡುವ ಉದ್ದೇಶದಿಂದ ಜ.23ರ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಯೀದ್ ಮಾತಾಡುತ್ತಿದ್ದರು.
ಸಂವಿಧಾನದ 370ನೇ ವಿಧಿಯನ್ವಯ ಕಾಶ್ಮೀರದಲ್ಲಿ ಕಾಶ್ಮೀರೇತರರಿಗೆ ಭೂಮಿ ಖರೀದಿಗೆ ಅವಕಾಶವಿಲ್ಲ, ನಿಜ. ಆದರೆ ಉದ್ದಿಮೆ ಶುರು ಮಾಡಲು ಇದು ಸಮಸ್ಯೆ ಅಲ್ಲವೇ ಅಲ್ಲ. ಕಾಶ್ಮೀರದಲ್ಲಿ 99 ವರ್ಷಗಳ ಅವಧಿಗೆ ಜಾಗಗಳು ಸಲೀಸಾಗಿ ಗುತ್ತಿಗೆಗೆ ಸಿಗುತ್ತವೆ. ಆ ನಂತರವೂ ಗುತ್ತಿಗೆಯ ಪುನರ್ ನವೀಕರಣ ಸುಲಭ. ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಪ್ರವಾಸಿ ತಾಣಗಳು ತಣ್ಣಗಿದ್ದರೂ ಭಣಗುಡುತ್ತಿವೆ. ಬನ್ನಿ ಎಂದು ಸಯೀದ್ ಅಲವತ್ತುಕೊಂಡರು.
ಸಯೀದ್ ಜೊತೆಗೆ ಉಪ ಮುಖ್ಯಮಂತ್ರಿ ಮಂಗತ್ ರಾಮ್ ಶರ್ಮ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಹಿರಿಯ ಉಪಾಧ್ಯಕ್ಷೆ ಹಾಗೂ ಸಯೀದ್ ಪುತ್ರಿ ಮೆಹಬೂಬ ಮುಫ್ತಿ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಕಾಶ್ಮೀರದ ಜನರಿಗೆ ಭಾವನಾತ್ಮಕ ಸ್ಪರ್ಶ ಬೇಕಿದೆ. ಅಲ್ಲಿನ ಹಿಂಸಾಚಾರಗಳನ್ನು ವೈಭವೀಕರಿಸಿ ಬಿಂಬಿಸಿರುವುದರಿಂದ ವಾಸ್ತವ ಪರಿಸ್ಥಿತಿ ಏನೆಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಕಾಶ್ಮೀರದ ಜನತೆಗೆ ಸಾಮಾಜಿಕ, ಆರ್ಥಿಕ ಹಾಗೂ ಭಾವನಾತ್ಮಕ ಬೆಂಬಲ ಬೇಕಾಗಿದೆ. ಅಲ್ಲಿ ಒಮ್ಮೆ ಬಂಡವಾಳ ಹೂಡಿ, ನೋಡಿ. ಈಗ ಅವಕಾಶ ತಪ್ಪಿಸಿಕೊಂಡರೆ ಮತ್ತೆ ಅದು ಸಿಗುವುದೋ ಇಲ್ಲವೋ. ಆಮೇಲೆ ಕಳೆದುಕೊಂಡದ್ದಕ್ಕೆ ಪರಿತಪಿಸಬೇಕಾಗುತ್ತದೆ ಎಂದು ಮೆಹಬೂಬ್ ಭಾವುಕರಾಗಿ ಮಾತಾಡಿದರು.
ಮುಖಪುಟ / ಇವತ್ತು... ಈ ಹೊತ್ತು...