ದಾಳಿ ಭೀತಿ : ಕೊಲ್ಕತಾ ದಕ್ಷಿಣೇಶ್ವರ ಕಾಳಿಗೆ ವಿಮೆ!
ಕೋಲ್ಕತ : ಗುಜರಾತ್ನ ಅಕ್ಷರಧಾಮ ದೇಗುಲದ ಮೇಲೆ ಉಗ್ರರು ದಾಳಿ ನಡೆಸಿ, ಅನೇಕ ಮುಗ್ಧ ಭಕ್ತರ ಹತ್ಯೆಗೈದ ಕಾರಣ, ಮುಂಜಾಗರೂಕತೆ ಕ್ರಮವಾಗಿ ಕೋಲ್ಕತಾದ ದೇಗುಲವೊಂದು ಉಗ್ರರ ದಾಳಿ ವಿಮೆ ಮಾಡಿಸಿದೆ.
ಹೂಗ್ಲಿ ನದಿಯ ತಟದಲ್ಲಿರುವ 19ನೇ ಶತಮಾನದಲ್ಲಿ ನಿರ್ಮಿತವಾದ ದಕ್ಷಿಣೇಶ್ವರ ಕಾಳಿ ದೇವಾಲಯಕ್ಕೆ ನಿತ್ಯ ಸುಮಾರು 50,000 ಭಕ್ತರು ಬರುತ್ತಾರೆ. ಒಂದು ವೇಳೆ ಭಯೋತ್ಪಾದಕರೇನಾದರೂ ದಾಳಿ ಇಟ್ಟರೆ ಆಗುವ ಅಪಾಯ ಅಷ್ಟಿಷ್ಟಲ್ಲ . ಅಂಥ ಸಂದರ್ಭದಲ್ಲಿ ಏನೂ ತಪ್ಪು ಮಾಡದೆ ಹಾನಿಗೊಳಲಾಗುವ ಭಕ್ತರಿಗೆ ಅಥವಾ ಅವರ ಕುಟುಂಬದವರಿಗೆ ನೆರವಾಗಲೆಂದು ಯುನೈಟೆಡ್ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ ದೇಗುವ ವಿಮೆ ಮಾಡಿಸಿದೆ. ಈಗಾಗಲೇ ವಿಮಾ ಪ್ರೀಮಿಯಂನ ಮೊದಲ ಕಂತು 1,50,000 ರುಪಾಯಿಯನ್ನು ಭರಿಸಿದೆ.
ಈ ಹೊಸ ವಿಮೆಯನ್ವಯ- ಅಕಸ್ಮಾತ್ ದೇಗುಲಕ್ಕೆ ಉಗ್ರರು ದಾಳಿಯಿಟ್ಟು , ಭಕ್ತರಿಗೆ ಹಾಗೂ ದೇಗುಲದ ಆಸ್ತಿ ಪಾಸ್ತಿಗೆ ಹಾನಿಯಾದರೆ ಕಂಪನಿ ವಿಮಾ ಹಣವನ್ನು ಕೊಡುತ್ತದೆ. ದಾಳಿ ನಡೆದರೆ, 72 ಗಂಟೆಗೊಳೊಳಗೆ ದೇಗುಲದ ದತ್ತಿಯವರು ವಿಮಾ ಕಂಪನಿಗೆ ವಿಚಾರವನ್ನು ತಿಳಿಸಬೇಕು. ಕೇಂದ್ರ ಗೃಹ ಸಚಿವಾಲಯದಲ್ಲಿ ಅದು ಉಗ್ರರ ದಾಳಿಯೆಂದು ದಾಖಲಾಗಿರಬೇಕು. ಹಾಗಿದ್ದರೆ ಮಾತ್ರ ವಿಮಾ ಮೊತ್ತವನ್ನು ಕಂಪನಿ ಕೊಡುವುದು. ದಾಳಿ ನಡೆದರೆ, ಆ ಸಂದರ್ಭದಲ್ಲಿ ಮೃತರಾದವರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ವಿಮೆಯ ಹಣ ದೊರೆಯುತ್ತದೆ.
ಗುಜರಾತ್ನ ಅಕ್ಷರಧಾಮದ ದೇವಾಲಯವಲ್ಲದೆ, ಜಮ್ಮುವಿನ ದೇಗುಲವೊಂದಕ್ಕೆ ಉಗ್ರರು ದಾಳಿಯಿಟ್ಟು 10 ನಾಗರಿಕರನ್ನು ಕೊಂದಿದ್ದರು. ಉಗ್ರರು ಇನ್ನಷ್ಟು ದೊಡ್ಡ ದೊಡ್ಡ ದೇವಾಲಯಗಳ ಮೇಲೆ ಗುರಿಯಿಡುವ ಆತಂಕವಿದೆ ಎಂದು ಪ್ರಧಾನಿ ವಾಜಪೇಯಿ ಡಿಸೆಂಬರ್ 1ನೇ ತಾರೀಕು ಎಚ್ಚರಿಸಿದ್ದರು.
ಜನವರಿ 1, 2003ನೇ ತಾರೀಕು ಹೊಸ ವರ್ಷದ ಆಚರಣೆಗಾಗಿ ಕೋಲ್ಕತಾದ ಕಾಳಿ ದೇವಳಕ್ಕೆ 15 ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ. ಹೀಗಾಗಿ ದೇಗುಲ ಹಾಗೂ ಅದರ ಸುತ್ತ ಮುತ್ತ ಬಿಗಿ ಭದ್ರತಾ ವ್ಯವಸ್ಥೆ ಮಾಡುವ ಕೆಲಸಗಳು ಭರದಿಂದ ಸಾಗಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...