24 ಜಿಲ್ಲೆ , 152 ತಾಲ್ಲೂಕು ಬರಪೀಡಿತ-ಸರ್ಕಾರ ಘೋಷಣೆ
ಬೆಂಗಳೂರು : 24 ಜಿಲ್ಲೆಗಳು ಹಾಗೂ 152 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಶುಕ್ರವಾರ (ಡಿ.27) ಘೋಷಿಸಿದೆ.
ಎಲ್ಲ ಬರ ಪೀಡಿತ ತಾಲ್ಲೂಕುಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ನಿಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಎಚ್.ಸಿ.ಶ್ರೀಕಂಠಯ್ಯ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು. ಅವರು ಶಾಸಕ ಎಚ್.ಎಸ್.ಶಿವಶಂಕರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಮಾರ್ಚ್ 3 ರಿಂದ ಸೆ.30, 2002 ರವರೆಗಿನ ರೈತರ ಖಾರಿಫ್ ಬೆಳೆ ಸಾಲಗಳ ಬಡ್ಡಿ ಮನ್ನಾ ಮಾಡಲಾಗಿದ್ದು , ಈ ಬಡ್ಡಿ ಮನ್ನಾ ಕೃಷಿಯೇತರ ಬ್ಯಾಂಕುಗಳಲ್ಲಿ ಪಡೆದ ಸಾಲಗಳಿಗೆ ಅನ್ವಯಿಸುವುದಿಲ್ಲ ಎಂದು ಶ್ರೀಕಂಠಯ್ಯ ತಿಳಿಸಿದರು.
ಪ್ರಗತಿಯಲ್ಲಿ ಸೂಪರ್ ಹೈವೇ : ಬೆಂಗಳೂರು- ಮೈಸೂರು ನಡುವಿನ ನಾಲ್ಕು ಮಾರ್ಗಗಳ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆಯ ಮೊದಲ ಹಂತದಲ್ಲಿ ಬೆಂಗಳೂರು-ರಾಮನಗರದ 33.7 ಕಿಮೀ ಉದ್ದದ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಶಾಸಕ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಸಚಿವ ಧರ್ಮಸಿಂಗ್ ಉತ್ತರಿಸಿದರು.
ಸೂಪರ್ ಹೈವೇ ಕಾಮಗಾರಿ ಪೂರ್ಣಗೊಂಡ ನಂತರ, ಬೆಂಗಳೂರು-ಮೈಸೂರು ಪ್ರಯಾಣ 1 ಗಂಟೆ 15 ನಿಮಿಷಗಳಿಗೆ ಕಡಿತಗೊಳ್ಳಲಿದೆ ಎಂದ ಧರ್ಮಸಿಂಗ್, ವಿಶ್ವಬ್ಯಾಂಕ್ ನೆರವಿನಲ್ಲಿ 18 ಜಿಲ್ಲೆಗಳ ಹೈವೇ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...