ವೀರಪ್ಪನ್ ಬಳಿಗೆ ಸಂಧಾನಕ್ಕೆ ಹೋಗಲು ಮಹದೇವ ಸ್ವಾಮಿ ಸಿದ್ಧ
ಬೆಂಗಳೂರು : ವೀರಪ್ಪನ್ ಜೊತೆ ಸಂಧಾನ ನಡೆಸಿ, ಸಂಯುಕ್ತ ಜನತಾ ದಳ (ಜೆಡಿ-ಯು) ದ ನಾಯಕ ಎಚ್.ನಾಗಪ್ಪನವರನ್ನು ಬಿಡಿಸಿ ತರಲು ಇದೇ ಪಕ್ಷದ ಕೊಳ್ಳೇಗಾಲ ನಾಯಕ ಪೊನ್ನಾಚಿ ಮಹದೇವ ಸ್ವಾಮಿಯನ್ನು ಕಳಿಸಿಕೊಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಐದು ಪ್ರಕರಣಗಳ ಆರೋಪಿ ಕೊಳತ್ತೂರು ಮಣಿ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರಿಗೆ ಜಾಮೀನು ಸಿಗಲು ಕೆಲವು ತಾಂತ್ರಿಕ ತೊಡಕುಗಳಿವೆ. ಈಗಾಗಲೇ ಜಾಮೀನಿಗಾಗಿ ಅವರು ಹಾಕಿರುವ ಎರಡು ಅರ್ಜಿಗಳು ಹೈಕೋರ್ಟ್ ಮುಂದಿವೆ. ಹೀಗಾಗಿ ತ್ವರಿತವಾಗಿ ಕಳುಹಿಸಲಾಗುವ ಏಕೈಕ ಸಂಧಾನಕಾರ ಮಹದೇವ ಸ್ವಾಮಿ. ಸಂಧಾನಕಾರರಾಗಿ ಹೋಗಲು ಮಹದೇವ ಸ್ವಾಮಿ ಒಪ್ಪಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಕಳುಹಿಸುವ ಸಿದ್ಧತೆ ಮಾಡುತ್ತೇವೆ ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಮಂಗಳವಾರ ಸುದ್ದಿಗಾರರಿಗೆ ಹೇಳಿದರು.
ಕೊಳತ್ತೂರು ಮಣಿ ವಿರುದ್ಧ ಒಂದು ಟಾಡಾ ಪ್ರಕರಣವಿದ್ದು, ಇದರ ಆರೋಪ ಪಟ್ಟಿಯನ್ನು ಸರ್ಕಾರ ಇನ್ನೂ ಸಲ್ಲಿಸಬೇಕಿದೆ. ಕಾನೂನು ತಜ್ಞರ ಜೊತೆ ಮಣಿ ವಿಚಾರದಲ್ಲೂ ಮಾತುಕತೆ ಮುಂದುವರೆಸಿದ್ದೇವೆ. ಮಹದೇವ ಸ್ವಾಮಿ ಅವರೊಬ್ಬರನ್ನೇ ಸಂಧಾನಕಾರರನ್ನಾಗಿ ಕಳುಹಿಸಿದರೆ ವೀರಪ್ಪನ್ ಒಪ್ಪುತ್ತಾನೆಯೇ ಎಂಬ ಅನುಮಾನವಿದೆ. ಎಸ್ಟಿಎಫ್ ಕಾರ್ಯಾಚರಣೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ಸಂಧಾನ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುವ ಕೆಲಸ ಶುರುವಾಗಿದೆ ಎಂದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ