ತುಮಕೂರಲ್ಲಿ ಮಿನಿಸ್ಟರುಗಳ ಸಮ್ಮುಖದಲ್ಲೇ ಬಾಲ್ಯ ವಿವಾಹ
ತುಮಕೂರು : ಕಲ್ಯಾಣ ಮಂಟಪವೊಂದರ ಮಾಲೀಕರೇ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಒಂದು ಜೋಡಿ ಕೇಂದ್ರ ಬಿಂದು. ಮಧುಗಿರಿ ತಾಲ್ಲೂಕಿನ ಕೋಟಗದಾಲದ ವಧು ನಾಗರತ್ನಮ್ಮನೇ ಸೆಳಕು. ಯಾಕೆಂದರೆ, ಆಕೆಗಿನ್ನೂ ಹದಿನೈದೇ ವರ್ಷ.
ಹೊಸ ಕಲ್ಯಾಣ ಮಂಟಪದ ಉದ್ಘಾಟನೆ ನಡೆದ ವಿಶೇಷ ಪರಿಯಿದು. ನಾಗರತ್ಮಮ್ಮನಿಗೆ ಕೋಡ್ಲಾಪುರದ ವರ ರಂಗಧಾಮಯ್ಯ ತಾಳಿ ಕಟ್ಟೇ ಬಿಟ್ಟ. ಗುಂಪಲ್ಲಿ ಗೋವಿಂದ ಎನ್ನುವಂತೆ ಬಾಲ್ಯವಿವಾಹ ಮುಗಿಯಿತು. ಮೂಕ ಪ್ರೇಕ್ಷಕರ ಸಾಲಿನಲ್ಲಿ ಸಚಿವರುಗಳಾದ ಡಾ.ಜಿ.ಪರಮೇಶ್ವರ, ಸಿ.ಆರ್.ಸಗೀರ್ ಅಹ್ಮದ್ ಹಾಗೂ ಸಂಸದ ಜಿ.ಎಸ್.ಬಸವರಾಜು ನಿಂತಿದ್ದರು.
ನಾಗರತ್ನಮ್ಮನ ಅಮ್ಮ ಕೆಂಪಮ್ಮನನ್ನು ಹುಡುಗಿಯ ವಯಸ್ಸೆಷ್ಟು ಅಂತ ಕೇಳಿದಾಗ, ಯಾವುದೇ ಅಳುಕಿಲ್ಲದೆ ‘ಹದಿನೈದು’ ಅಂದರು. ಎರಡು ವರ್ಷದ ಹಿಂದೆ ನಾಗರತ್ಮಮ್ಮ ಆರನೇ ಇಯತ್ತೆಯಲ್ಲಿ ಓದುತ್ತಿದ್ದಾಗ ಆಕೆಯನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಲಾಗಿತ್ತು,
ನಾಗರತ್ನಮ್ಮನನ್ನು ನೋಡಿದರೇ, ಆಕೆಯಿನ್ನೂ ಪುಟ್ಟ ಹುಡುಗಿ ಅನ್ನುವಂತಿದ್ದಾಳೆ. ಆದರೆ ನೆರೆದಿದ್ದ ಮಂತ್ರಿ ಮಹೋದಯರಿಗೆ ಕನಿಷ್ಠ ಹುಡುಗಿಯ ವಯಸ್ಸಿನ ಬಗ್ಗೆ ಗುಮಾನಿ ಕೂಡ ಬರಲಿಲ್ಲ. ಅಲ್ಲೂ ಸಂಪುಟ ಪುನರ್ರಚನೆ ಭಿನ್ನಮತದ್ದೇ ಗುಸುಗುಸು.
ಅಂದಹಾಗೆ, ಪರಮೇಶ್ವರ್ ಉನ್ನತ ಶಿಕ್ಷಣ ಸಚಿವರು. ಸಗೀರ್ ಅಹಮದ್ ಅವರದ್ದು ವಸತಿ ಖಾತೆ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...