ತಣ್ಣೀರು ಬಾವಿಯ ವಿದ್ಯುತ್ ಕಂಪೆನಿಯಿಂದ ಕೆಪಿಟಿಸಿಎಲ್ಗೆ ಧಮಕಿ
ಮಂಗಳೂರು : ನಮಗೆ ಬರಬೇಕಿದ್ದ ಬಾಕಿ ಹಣ ಕೊಡಿ, ಇಲ್ಲದಿದ್ದರೆ ಸೆಪ್ಟೆಂಬರ್ನಲ್ಲಿ ನಾವು ಕಂಪೆನಿ ಮುಚ್ಚುತ್ತೇವೆ ಎಂದು ತಣ್ಣೀರು ಬಾವಿಯ ವಿದ್ಯುತ್ ಕಂಪೆನಿ(ಟಿಬಿಪಿಸಿ) ಕೆಪಿಟಿಸಿಎಲ್ಗೆ ಧಮಕಿ ಹಾಕಿದೆ.
ಕಾರಣ- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ತಣ್ಣೀರು ಬಾವಿ ವಿದ್ಯುತ್ ಕಂಪೆನಿಯಿಂದ ಖರೀದಿಸಿದ ವಿದ್ಯುತ್ನ ಬಾಕಿ ತೀರಿಸಿಲ್ಲ. ಬಾಕಿ ಮೊತ್ತ ಚಿಕ್ಕದಲ್ಲ. 225 ಕೋಟಿ ರೂಪಾಯಿ. ಕಳೆದ ಒಂದು ವರ್ಷದಿಂದ ವಿದ್ಯುತ್ ಉತ್ಪಾದಿಸುತ್ತಿರುವ ಕಂಪೆನಿಗೆ ವಿದ್ಯುತ್ ಪ್ರಸರಣ ನಿಗಮ ಬಾಕಿ ಹಣ ಪಾವತಿಸುತ್ತಿಲ್ಲ.
ವಿದ್ಯುತ್ ಖರೀದಿಗಾಗಿ ಇತರ ಅವಕಾಶಗಳನ್ನು ಹುಡುಕುವಂತೆ ರಾಜ್ಯ ವಿದ್ಯುತ್ ನಿಯಂತ್ರಣ ಮಂಡಳಿಯು ಕೆಪಿಟಿಸಿಗೆ ಸೂಚಿಸಿರುವುದು ನಮಗೆ ಗೊತ್ತಾಗಿದೆ. ಆದರೆ ಟಿಬಿಪಿಸಿಯ ಬಾಕಿ ಹಣವನ್ನು ಪಾವತಿಸದೇ ಇತರ ಅವಕಾಶಗಳ ಬೆನ್ನಟ್ಟಿ ಹೋಗುವುದು ಸಾಧ್ಯವಿಲ್ಲ ಎಂದು ಟಿಬಿಪಿಸಿಯ ಅಧಿಕಾರಿಗಳು ಹೇಳುತ್ತಾರೆ.
ಟಿಬಿಪಿಸಿಯ ಪಿಪಿಎ(ವಿದ್ಯುತ್ ಖರೀದಿ ಒಪ್ಪಂದ)ಆರು ವರ್ಷಗಳ ಆಯುಸ್ಸಿನದು. ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಟಿಬಿಪಿಸಿಯ ಆಯುಸ್ಸು 30 ವರ್ಷ. ಈ ನಿಟ್ಟಿನಲ್ಲಿ ಕಂಪೆನಿಯು ವಿದ್ಯುತ್ ಮಾರಾಟ ಒಪ್ಪಂದಗಳ ಅವಧಿ ವಿಸ್ತರಣೆಗೆ ಪ್ರಯತ್ನಗಳನ್ನು ಮುಂದುವರೆಸಿದೆ.
ಟಿಬಿಪಿಸಿ, ನ್ಯಾಫ್ತಾ ಆಧಾರಿತ 220 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕಂಪೆನಿ. ಜಗತ್ತಿನ ಅತೀ ದೊಡ್ಡ ಹಾಗೂ ಭಾರತದ ಪ್ರಥಮ ಬಾರ್ಜ್ ಮೌಂಟೆಡ್ ವಿದ್ಯುತ್ ಕಂಪೆನಿ ಮಂಗಳೂರಿನ ಸಮುದ್ರದ ಮೇಲೆ ನಿಂತಿದೆ. ಇಡೀ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಕೊರಿಯಾದಲ್ಲಿ ಹ್ಯುಂಡೈ ಕಂಪೆನಿ ತಯಾರಿಸಿದ್ದು, ನಂತರ ಅದನ್ನು ಮಂಗಳೂರಿನ ತಣ್ಣೀರು ಬಾವಿಗೆ ಸ್ಥಳಾಂತರಿಸಲಾಗಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications