ಪರವಾನಗಿ ವಿತರಣೆ, ವಾಹನ ನೋಂದಣಿ ವ್ಯವಸ್ಥೆಯ ಖಾಸಗೀಕರಣ
ಬೆಂಗಳೂರು : ವಾಹನ ಚಾಲನಾ ಪರವಾನಗಿ ವಿತರಣೆ, ವಾಹನಗಳ ನೋಂದಣಿ ಮತ್ತು ಅವುಗಳ ತಪಾಸಣೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ಟಿಓ) ಆಗುತ್ತಿರುವ ಭ್ರಷ್ಟಾಚಾರ ತಡೆಯಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇನ್ನಾರು ತಿಂಗಳಲ್ಲಿ ಖಾಸಗೀಕೃತ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ರಾಜ್ಯ ಸಾರಿಗೆ ಸಚಿವ ಸಗೀರ್ ಅಹಮದ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿಯಲ್ಲಿ ಸೋಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ಸ್ ಮ್ಯಾನುಫ್ಯಾಕ್ಚರರ್ಸ್ (ಸಿಐಎಎಂ) ದೆಹಲಿಯಲ್ಲಿ ಈಗಾಗಲೇ ವಾಹನ ತಪಾಸಣೆ, ಪರವಾನಗಿ ವಿತರಣೆ ಹಾಗೂ ಪರಿಶೀಲನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಅನೇಕ ಸರ್ಕಾರೇತರ ಸಂಸ್ಥೆಗಳು ಕರ್ನಾಟಕದಲ್ಲೂ ಇದೇ ರೀತಿಯ ಕೆಲಸ ಮಾಡಲು ಉತ್ಸುಕವಾಗಿವೆ. ಖಾಸಗೀಕರಣ ಪ್ರಕ್ರಿಯೆಯ ಕೆಲಸಗಳು ಈಗಾಗಲೇ ಶುರುವಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಅಂತಿಮ ರೂಪು ರೇಷೆ ಕೊಡಲಾಗುವುದು ಎಂದರು.
ಖಾಸಗೀಕರಣದಿಂದ ಆರ್ಟಿಓಗಳಲ್ಲಿ ದಲ್ಲಾಳಿಗಳ ಸುಲಿಯುವಿಕೆ ತಪ್ಪುತ್ತದೆ. ನಾಗರಿಕರಿಗೆ ಪರವಾನಗಿ ಪಡೆಯುವುದು, ವಾಹನಗಳನ್ನು ನೋಂದಾಯಿಸಿಕೊಳ್ಳುವುದು ವಿಳಂಬವಾಗುವುದೂ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಮಧ್ಯಸ್ಥರ ಬಾಯಿಗೆ ಹಣ ಹಾಕುವುದು ತಪ್ಪುತ್ತದೆ ಎಂದು ಅಹಮದ್ ಹೇಳಿದರು.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿದ ಕಾರಣ ಬಸ್ ಪ್ರಯಾಣ ಬೆಲೆಯನ್ನು ಹೆಚ್ಚಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕ್ರಮವನ್ನು ಸಮರ್ಥಿಸಿಕೊಂಡ ಸಗೀರ್ ಅಹ್ಮದ್, ಅಕಸ್ಮಾತ್ ಮತ್ತೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿದರೆ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎಂದರು.
ಆಟೋ ದರ ಹೆಚ್ಚಳ : ಆಟೋರಿಕ್ಷಾ ಪ್ರಯಾಣದ ಕನಿಷ್ಠ ದರವನ್ನು ಈಗಿನ 8.80 ರುಪಾಯಿಯಿಂದ 9 ರುಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರತಿ ಕಿಲೋ ಮೀಟರ್ಗೆ 4 ರುಪಾಯಿಯಿಂದ 4.50 ರುಪಾಯಿಗೆ ಬೆಲೆ ನಿಗದಿ ಪಡಿಸಲಾಗಿದೆ. ಸದ್ಯದಲ್ಲೇ ಇದು ಜಾರಿಗೆ ಬರಲಿದೆ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...