ಮೇ 27ರಂದು ‘ಕೋಮುವಾದದ ವಿರುದ್ಧ ಕರ್ನಾಟಕ’ ಬೃಹತ್ ಜಾಥಾ
ಬೆಂಗಳೂರು : ಸಿದ್ಧಗಂಗೆ ಮಠದ ಶಿವಕುಮಾರ ಸ್ವಾಮೀಜಿ, ಆದುಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ನಟ ದಿಲಿಪ್ ಕುಮಾರ್, ಕುಲದೀಪ್ ನಯ್ಯರ್ ಸೇರಿದಂತೆ 50ಕ್ಕೂ ಹೆಚ್ಚು ಸಂಘಟನೆಗಳ ಸುಮಾರು 30 ಸಾವಿರ ಮುಖಂಡರು ಮೇ 27ರಂದು ನಗರದಲ್ಲಿ ‘ಕೋಮುವಾದದ ವಿರುದ್ಧ ಕರ್ನಾಟಕ’ ಎಂಬ ಜಾಥಾ ನಡೆಸಲಿದ್ದಾರೆ.
ಆ ದಿನ ಮಧ್ಯಾಹ್ನ 12 ಗಂಟೆಗೆ ಹಡ್ಸನ್ ವೃತ್ತದಿಂದ ನ್ಯಾಷನಲ್ ಕಾಲೇಜಿನ ಮೈದಾನದವರೆಗೆ ಜಾಥಾ. ನಂತರ ಮಧ್ಯಾಹ್ನ 3ಗಂಟೆಯಿಂದ 6 ಗಂಟೆವರೆಗೆ ಸಭೆ ನಡೆಯಲಿದ್ದು, ಪ್ರಮುಖ ನಾಯಕರು ಕೋಮು ಸೌಹಾರ್ದತೆ ಕುರಿತು ಮಾತಾಡಲಿದ್ದಾರೆ ಎಂದು ಜನಮತದ ಶ್ರೀಧರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಸಾಮರಸ್ಯ ಸಂದೇಶ ಉತ್ತರ ದೇಶಗಳಿಗೆ ತಲುಪಲಿ ಹಾಗೂ ಸಂಘ ಪರಿವಾರದ ಹುನ್ನಾರಗಳು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಈ ಬೃಹತ್ ಜಾಥಾ ಆಯೋಜಿಸಲಾಗಿದೆ. ಶೃಂಗೇರಿ ಹಾಗೂ ಉಡುಪಿಗಳಲ್ಲಿ ಸಂಘ ಪರಿವಾರದವರು ಯುದ್ಧ ಮಾಡಲು ಲಾಠಿ ಹಂಚುತ್ತಿದ್ದಾರೆ. ಇದು ಪಾಕ್ ವಿರುದ್ಧದ ಯುದ್ಧಕ್ಕಲ್ಲ, ಜಾತಿ ಜಾತಿಗಳ ನಡುವಿನ ಯುದ್ಧಕ್ಕೆ ಎಂದು ಶ್ರೀಧರ್ ವಿಷಾದಿಸಿದರು.
ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸಿದ್ದ ಬಾಲಗಂಗಾಧರನಾಥ ಸ್ವಾಮೀಜಿಯನ್ನೂ ಜಾಥಾಕ್ಕೆ ಸೇರಿಸಿಕೊಂಡಿದ್ದೀರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಶ್ರೀಧರ್ ಉತ್ತರಿಸಿದ್ದು ಹೀಗೆ- ಮಠಾಧೀಶರು ಯಾವುದೇ ಒಂದು ಜಾತಿಗೆ ಸೀಮಿತವಾಗಿರುವುದಿಲ್ಲ. ಅವರು ಎಲ್ಲೆಡೆಗೆ ಬರಬೇಕಾಗುತ್ತದೆ. ಆರೆಸ್ಸೆಸ್ನಲ್ಲೂ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಅಭಿಮಾನಿಗಳಿದ್ದಾರೆ. ಪೇಜಾವರ ಶ್ರೀಗಳನ್ನೂ ಕರೆಯಲು ಹೋಗಿದ್ದೆವು. ಆದರೆ ಅವರು ಜಾತಿ ವ್ಯವಸ್ಥೆಗೆ ಅಗತ್ಯ ಎಂಬ ಅಭಿಪ್ರಾಯ ಮುಂದಿಟ್ಟು, ಜಾಥಾದಲ್ಲಿ ಭಾಗವಹಿಸಲು ಆಸಕ್ತಿ ತೋರಲಿಲ್ಲ. ಧಾರ್ಮಿಕ ಭಾವನೆಯನ್ನೇ ವೋಟ್ಬ್ಯಾಂಕ್ ಆಗಿಸಿಕೊಳ್ಳುವ ಹುನ್ನಾರಗಳ ಬಗೆಗೂ ಜನಜಾಗೃತಿ ಮೂಡಿಸಲಿದ್ದೇವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...