ಕಾಫಿ ಬೆಳೆಗಾರರ ಬೇಡಿಕೆ ಪೂರೈಸಲು ಸರಕಾರಕ್ಕೆ ಏಪ್ರಿಲ್ 10ರ ಗಡುವು
ಹಾಸನ : ಕಾಫಿ ಬೆಳೆಗಾರರ ಪ್ರಮುಖ ಬೇಡಿಕೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಏಪ್ರಿಲ್ 10ರೊಳಗೆ ಸರಕಾರಾತ್ಮಕ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ಏಪ್ರಿಲ್ 15ರಿಂದ ಅನಿರ್ದಿಷ್ಟಾವಧಿಯವರೆಗೆ ಕಾಫಿ ಉದ್ಯಮ ಬಂದ್ಆಚರಿಸಲು ರಾಜ್ಯ ಕಾಫಿ ಬೆಳೆಗಾರರ ಒಕ್ಕೂಟ ನಿರ್ಧರಿಸಿದೆ.
ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎ. ಜಗನ್ನಾಥ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಾಫಿ ಉದ್ಯಮದ ಸಮಸ್ಯೆಗಳನ್ನು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗಮನಕ್ಕೆ ತರಲಾಗಿದೆ. ಮೂರು - ನಾಲ್ಕು ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ಬಜೆಟ್ನಲ್ಲಿಯೂ ಕಾಫಿ ಬೆಳೆಗಾರರಿಗೆ ಪ್ರೋತ್ಸಾಹದಾಯಕವಾದ ಯೋಜನೆಗಳನ್ನು ನಿರೀಕ್ಷಿಸಿದ್ದೆವು. ಕೃಷಿ ವರಮಾನ ತೆರಿಗೆಯನ್ನು ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿತ್ತು. ಆದರೆ ಸರಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಜಗನ್ನಾಥ್ ವಿಷಾದಿಸಿದರು.
ಕಾಫಿ ಬೆಳೆಗಾರರು ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಪುನರ್ ಸಾಲ ಸಿಗದೇ ಇದ್ದಲ್ಲಿ ತೋಟಗಳ ನಿರ್ವಹಣೆಯನ್ನು ಕೈಬಿಡಬೇಕಾಗುತ್ತದೆ. ಆದ್ದರಿಂದ ಏಪ್ರಿಲ್ 10ರೊಳಗೆ ಬೆಳೆಗಾರರ ಸಾಲ ಮನ್ನಾ, ಬಡ್ಡಿ ಮನ್ನಾ, ಕೃಷಿ ವರಮಾನ ತೆರಿಗೆ ರದ್ದು , ಹೊಸ ಸಾಲ ಮಂಜೂರಾತಿ ಮುಂತಾದ ಕ್ರಮಗಳನ್ನು ಪ್ರಕಟಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಕಾಫಿ ಉದ್ಯಮ ಬಂದ್ ಆಚರಿಸಲಾಗುವುದು ಎಂದು ಜಗನ್ನಾಥ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications