ಇನ್ನೈದು ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣ- ಪರಮಹಂಸ
ಫೈಜಾಬಾದ್ : ಅಯೋಧ್ಯೆಯಲ್ಲಿನ ಬಿಗಿ ಭದ್ರತಾ ವ್ಯವಸ್ಥೆಯನ್ನು ತಕ್ಷಣವೇ ತೆರವುಗೊಳಿಸಬೇಕು. ಕಡಿದು ಹಾಕಿರುವ ಬಸ್ಸು ಹಾಗೂ ರೈಲು ಸಂಪರ್ಕವನ್ನು ಮತ್ತೆ ಕಲ್ಪಿಸಬೇಕು. ಇಲ್ಲವಾದಲ್ಲಿ ಈಗಿಂದೀಗಲೇ ಅನಿರ್ದಿಷ್ಟ ಮುಷ್ಕರ ಹೂಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಭಾನುವಾರ ಮಧ್ಯಾಹ್ನ ಘೋಷಿಸಿದ್ದಾರೆ.
ಇದೇ ಒತ್ತಾಯವನ್ನು ಮುಂದಿಟ್ಟು ಬಿಜೆಪಿ ಶಾಸಕ ಲಲ್ಲೂ ಸಿಂಗ್ ಈಗಾಗಲೇ ಕಲೆಕ್ಟರೇಟ್ ಆವರಣದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಅಶೋಕ್ ಸಿಂಘಾಲ್ ಸುದ್ದಿಗಾರರೊಡನೆ ಮಾತಾಡಿದ್ದು ಇದೇ ಜಾಗದಲ್ಲಿ. ಪೂರ್ಣಾಹುತಿ ಯಾಗದ ನಂತರ ಸುಮಾರು 30 ಸಾವಿರ ಕರ ಸೇವಕರು ಇಲ್ಲಿಂದ ಶಾಂತಿಯುತವಾಗಿ ತೆರಳಿದ್ದಾರೆ. ಹೀಗಿರುವಾಗ ಇಲ್ಲಿ ಯಾತ್ರಾರ್ಥಿಗಳಿಗೆ ತೊಂದರೆಯಾಗುವ ಪ್ರಶ್ನೆಯೇ ಇಲ್ಲ. ಆದರೂ ಬಿಗಿ ಭದ್ರತೆ ಯಾಕೆ ಬೇಕು ಎಂದು ಸಿಂಘಾಲ್ ಪ್ರಶ್ನಿಸಿದರು.
ಇನ್ನೈದು ವರ್ಷಗಳಲ್ಲಿ ಮಂದಿರ ನಿರ್ಮಾಣ : ರಾಮ ಮಂದಿರ ನಿರ್ಮಾಣ ಕಾರ್ಯ ಈ ವರ್ಷವೇ ಪ್ರಾರಂಭವಾಗಲಿದ್ದು, 2007ನೇ ಇಸವಿ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ರಾಮಮಂದಿರ ನಿರ್ಮಾಣ ನ್ಯಾಸ್ ಅಧ್ಯಕ್ಷ ರಾಮಚಂದ್ರ ದಾಸ್ ಪರಮಹಂಸ ಭಾನುವಾರ ತಿಳಿಸಿದ್ದಾರೆ.
ಮಾರ್ಚ್ 15ರಂದು ಶಿಲಾದಾನ ಶಾಂತಯುವಾಗಿ ನಡೆದಿರುವುದಕ್ಕೆ ಸಂತೋಷವಾಗಿದೆ. ಮಂದಿರ ನಿರ್ಮಾಣ ಕಾರ್ಯವೂ ಹೀಗೆಯೇ ಮುಂದುವರೆಯಲಿದೆ. ತನ್ನ ವಶಕ್ಕೆ ತೆಗೆದುಕೊಂಡಿರುವ ಜಾಗವನ್ನು ಸರ್ಕಾರ ಶೀಘ್ರದಲ್ಲೇ ರಾಮ ಜನ್ಮಭೂಮಿ ಟ್ರಸ್ಟ್ಗೆ ಹಸ್ತಾಂತರಿಸುತ್ತದೆ ಎಂಬ ಆಶಯ ನನ್ನದು ಎಂದು ಪರಮಹಂಸ ಸುದ್ದಿಗಾರರಿಗೆ ಹೇಳಿದರು.
ಪ್ರಶ್ನೆಯಾಂದಕ್ಕೆ ಉತ್ತರಿಸಿದ ಅವರು, ಒಂದು ವೇಳೆ ಸರ್ಕಾರ ಸ್ಥಳವನ್ನು ಟ್ರಸ್ಟಿಗೆ ಹಸ್ತಾಂತರಿಸದಿದ್ದರೆ, ಒತ್ತಾಯ ಹೇರಿಯಾದರೂ ಅದನ್ನು ಪಡೆದೇ ತೀರುತ್ತೇನೆ. ಅದು ನಮ್ಮ ಜಾಗ. ಪರರ ಜಾಗವನ್ನು ನಾವು ಕೇಳುತ್ತಿಲ್ಲ. ಅದು ನ್ಯಾಸ್ಗೆ ಸೇರಲೇಬೇಕು ಎಂದರು.
ವಾಜಪೇಯಿ ಈಗಾಗಲೇ ಬಿಕ್ಕಟ್ಟಿನಲ್ಲಿದ್ದಾರೆ. ಅವರು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವರೋ ಗೊತ್ತಿಲ್ಲ. ಸಮಾಜ್ಧಾರ್ ಮುಸ್ಲಿಮರ ಜೊತೆ ಮಾತನಾಡಿ, ಈ ಬಿಕ್ಕಟ್ಟನ್ನು ಬಗೆಹರಿಸುವುದು ಸಾಧ್ಯವಾದರೆ ನಾನು ಅದಕ್ಕೂ ಸಿದ್ಧ. ಅಯೋಧ್ಯೆ ರಾಮ ಹುಟ್ಟಿದ ಸ್ಥಳ ಎಂಬುದು ಪ್ರತಿಯಾಬ್ಬ ಮುಸ್ಲಿಮನಿಗೂ ಗೊತ್ತು. ಈಗ ಇಲ್ಲಿ ಪರಿಸ್ಥಿತಿ ಶಾಂತವಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಇಲ್ಲಿನ ಬಿಗಿ ಪಹರೆಯನ್ನು ಸಡಿಲಿಸುವುದಾಗಿ ಗೃಹ ಸಚಿವ ಎಲ್.ಕೆ.ಅಡ್ವಾಣಿ ದೂರವಾಣಿಯಲ್ಲಿ ನನಗೆ ಹೇಳಿದರು ಎಂದು ಪರಮಹಂಸ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications