ಮಂದಿರ ವಿವಾದದ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಪೇಜಾವರ ಶ್ರೀಗಳ ಸಲಹೆ
ಮಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೇ ಬೇಡವೇ ಎಂಬ ಬಗ್ಗೆ ಕೇಂದ್ರ ಸರಕಾರ ದೇಶಾದ್ಯಂತ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ರಾಮಮಂದಿರ ನಿರ್ಮಾಣ ಸಮಿತಿಯಲ್ಲಿ ಹಿಂದೆ ಸಕ್ರಿಯರಾಗಿದ್ದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈ ವಿವಾದದ ಬಗ್ಗೆ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆಯಾಗಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸ್ವಾಮೀಜಿ ಹೇಳಿದರು. ಮಂದಿರ- ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರವು, ಸ್ಪಷ್ಟನೀತಿಯಾಂದನ್ನು ರೂಪಿಸಬೇಕು. ಅಯೋಧ್ಯೆಯಲ್ಲಿ ನಡೆಯಲಿರುವ ಸಾಂಕೇತಿಕ ಪೂಜೆ ಅಷ್ಟೇನೂ ಪ್ರಮುಖವಲ್ಲ. ಮುಖ್ಯ ಪ್ರಶ್ನೆ ಯಿರುವುದು ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ್ದು. ಆದಷ್ಟು ಬೇಗನೆ ಈ ಬಗ್ಗೆ ತೀರ್ಪು ನೀಡುವಂತೆ ಸರಕಾರ ಸುಪ್ರಿಂ ಕೋರ್ಟ್ಗೆ ಮನವಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಕೇಂದ್ರಕ್ಕೆ ಸಲಹೆ ಮಾಡಿದರು.
ಸಾಂಕೇತಿಕ ಪೂಜೆಗೆ ಅನುಮತಿ ನಿರಾಕರಿಸಿ ಕೋರ್ಟ್ ನೀಡಿರುವ ಮಧ್ಯಂತರ ನಿರ್ದೇಶನದ ಬಗ್ಗೆ ಹೇಳಿದ ಸ್ವಾಮೀಜಿ ಕೋರ್ಟ್ ಅಂತಿಮ ತೀರ್ಪು ನೀಡಿದರೂ ಈ ವಿವಾದ ಇತ್ಯರ್ಥವಾಗುತ್ತದೆ ಎಂದೇನಿಲ್ಲ. ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ನಾಯಕರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಪ್ರಯತ್ನಗಳನ್ನೂ ಮಾಡಬೇಕು ಎಂದರು.
ಕೋರ್ಟ್ ತೀರ್ಪು ರಾಮ ಮಂದಿರ ನಿರ್ಮಾಣದ ಪರವಾಗಿರಲಿ, ಅಥವಾ ವಿರೋಧವಾಗಿಯೇ ಇರಲಿ, ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ ಸಂವಿಧಾನದ ಚೌಕಟ್ಟನ್ನು ಮೀರದೇ ಮಂದಿರ ನಿರ್ಮಾಣಕ್ಕಾಗಿ ಜನರ ನ್ಯಾಯಾಲಯದ ಮೊರೆ ಹೋಗುವುದಾಗಿ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications