ನ್ಯಾಯಾಲಯ ನಿಂದನೆ: ಬೂಕರ್ ವಿಜೇತೆ ಅರುಂಧತಿ ರಾಯ್ಗೆ ಜೈಲು
ನವದೆಹಲಿ : ನರ್ಮದಾ ಬಚಾವ್ ಆಂದೋಲನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿಂದನೆಯ ಅಪರಾಧದ ಮೇಲೆ ಬುಕರ್ ಪ್ರಶಸ್ತಿ ವಿಜೇತ ಅರುಂಧತಿ ರಾಯ್ ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಾಲಯ ನಿಂದನೆಗಾಗಿ ಅರುಂಧತಿ ರಾಯ್ ಅವರಿಗೆ ಒಂದು ದಿನದ ಸಾಂಕೇತಿಕ ಜೈಲು ಶಿಕ್ಷೆ ಮತ್ತು 2 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ. ಬುಧವಾರ ಮಧ್ಯಾಹ್ನ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಅಮೊದ್ ಕಾಂತ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಾನು ಅಫಿದವಿತ್ನಲ್ಲಿ ನೀಡಿರುವ ಹೇಳಿಕೆಯನ್ನು ಸಮರ್ಥಿಸುತ್ತದೆ ಎಂದು ಲೇಖಕಿ ಅರುಂಧತಿ ರಾಯ್ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿದ್ದು, ನ್ಯಾಯಾಂಗ ನಿಂದನೆಗೆ ವಿಧಿಸಿರುವ ದಂಡವನ್ನು ಕಟ್ಟುವ ಬಗ್ಗೆ ತಾವಿನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ ಕೋರ್ಟ್ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಿದೆ.
2000ನೇ ಇಸವಿಯ ಅಕ್ಟೋಬರ್ನಲ್ಲಿ ನರ್ಮದಾ ಅಣೆಕಟ್ಟು ಕಾರ್ಯ ಮುಂದುವರೆಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ, ಅರುಂಧತಿ ರಾಯ್ ರ್ಯಾಲಿಯಾಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೋರ್ಟ್ ತೀರ್ಪನ್ನು ಪ್ರತಿಭಟಿಸಿದ ತಮ್ಮ ಕ್ರಮವನ್ನು ಸಮರ್ಥಿಸಿ ಅರುಂಧತಿ ರಾಯ್ ಅಫಿದವಿತ್ ಸಲ್ಲಿಸಿದ್ದು, ತಮ್ಮ ನಿಲುವನ್ನು ಅಫಿದವಿತ್ನಲ್ಲಿ ಬಲವಂತವಾಗಿ ಸಮರ್ಥಿಸಿಕೊಂಡು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications