25 ಸಾವಿರ ಹುದ್ದೆ ಕಡಿತಕ್ಕೆಆಡಳಿತ ಸುಧಾರಣಾ ಆಯೋಗ ಶಿಫಾರಸು
ಬೆಂಗಳೂರು: ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್)ಯಡಿ 25 ಸಾವಿರ ಹುದ್ದೆಗಳನ್ನು ಕಡಿತಗೊಳಿಸುವಂತೆ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ರಾಜ್ಯದ ಬೊಕ್ಕಸದ ಹಿತದೃಷ್ಟಿಯಿಂದ ಹಾಗೂ ಆಡಳಿತ ಸಿಬ್ಬಂದಿಯ ಗಾತ್ರವನ್ನು ಸರಿಗೊಳಿಸಲು ಹುದ್ದೆಗಳ ಕಡಿತ ಅನಿವಾರ್ಯವೆಂದು ಆಯೋಗ ಅಭಿಪ್ರಾಯಪಟ್ಟಿದೆ. ಅಂತೆಯೇ 10 ವರ್ಷಗಳಿಗೊಮ್ಮೆ ಮಾತ್ರ ವೇತನ ಆಯೋಗ (ಪೇ ಕಮೀಷನ್) ರಚಿಸಲು ಆಯೋಗ ಸರ್ಕಾರಕ್ಕೆ ಸಲಹೆ ಮಾಡಿದೆ.
ಐದು ಮಂದಿ ಸದಸ್ಯರ ಆಡಳಿತಾ ಸುಧಾರಣಾ ಆಯೋಗದ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಅವರು ಆಯೋಗದ ಅಂತಿಮ ವರದಿಯನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಗುರುವಾರ ಸಲ್ಲಿಸಿದರು. ಸಂಪುಟದ ಹಿರಿಯ ಸದಸ್ಯರ ಸಮ್ಮುಖದಲ್ಲಿ ಆಯೋಗದ ಶಿಫಾರಸ್ಸುಗಳ ಕುರಿತು ರಾಮಸ್ವಾಮಿ ವಿವರಣೆ ನೀಡಿದರು. ಸರ್ಕಾರದ ಆಡಳಿತ ಸಮರ್ಪಕಗೊಳ್ಳಲು ಅಗತ್ಯವಾದ ಮೂಲಭೂತ ಚೌಕಟ್ಟನ್ನು ಆಯೋಗದ ವರದಿ ಒದಗಿಸಿದೆ ಎಂದು ರಾಮಸ್ವಾಮಿ ಹೇಳಿದರು.
ವರದಿಯ ಮುಖ್ಯಾಂಶಗಳು :
- ಕೆಲವು ಮಂಡಳಿಗಳು, ನಿಗಮಗಳು, ಸರ್ಕಾರಿ ಉದ್ದಿಮೆಗಳನ್ನು ಸರ್ಕಾರ ಕೈ ಬಿಡಬೇಕು.
- ವಿಆರ್ಎಸ್ ಯೋಜನೆಯಡಿ 25 ಸಾವಿರ ಹುದ್ದೆಗಳ ಕಡಿತ. ರದ್ದು ಮಾಡಬೇಕಾದ ಹುದ್ದೆಗಳನ್ನು ಇಲಾಖಾವಾರು ಆಯೋಗ ಗುರ್ತಿಸಿದೆ.
- 15 ವರ್ಷ ಸೇವಾವಧಿ ಪೂರೈಸಿದ ಎಲ್ಲ ನೌಕರರಿಗೆ ಸಾಮರ್ಥ್ಯ ಸಾಬೀತು ಪರೀಕ್ಷೆಯನ್ನು ನಡೆಸಬೇಕು. 25 ವರ್ಷಗಳ ಸೇವಾವಧಿ ನಂತರ ಇನ್ನೊಮ್ಮೆ ಪರೀಕ್ಷೆ ನಡೆಸಬೇಕು.
- ಶಾಸಕರು ಹಾಗೂ ಸಂಸದರಿಗೆ ಸಾರ್ವಜನಿಕ ನಡಾವಳಿಯ ಕುರಿತು ನೀತಿ ಸಂಹಿತೆ ಜಾರಿಗೊಳಿಸುವುದು. ನೀತಿ ಸಂಹಿತೆಯನ್ನು ಆಯೋಗ ಸಿದ್ಧಪಡಿಸಿದೆ.
- 17 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದ ಸರ್ಕಾರಿ ಅಧಿಕಾರಿಗಳಿಗೆ ಖಾಸಗಿ ವಲಯಗಳಲ್ಲಿ ಸೇವೆ ಸಲ್ಲಿಸಿಲು ಅವಕಾಶ ಮಾಡಿಕೊಡಬೇಕು. ಅಲ್ಲಿ ಅನುಭವ ಗಳಿಸಿದ ನಂತರ ಆ ಅಧಿಕಾರಿಗಳು ಪುನಃ ಸರ್ಕಾರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು.
ಮುಖಪುಟ / ಇವತ್ತು... ಈ ಹೊತ್ತು...