ಹಾವೇರಿಯಲ್ಲಿ ಇನ್ನೊಬ್ಬ ರೈತನ ಆತ್ಮಹತ್ಯೆ : ಇದು 19ನೆಯದು !
ಹಾವೇರಿ : ಭೀಮಪ್ಪ ಬಸಪ್ಪ ಶಿವಬಸಕ್ಕನವರ್(62) ಎಂಬ ರೈತ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಹಾವೇರಿ ಜಿಲ್ಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಈವರೆಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 19ಕ್ಕೆ ಏರಿದೆ. ಈ ಪೈಕಿ ಭೀಮಪ್ಪ ಬಸಪ್ಪ ಸೇರಿದಂತೆ ಹಾನಗಲ್ ತಾಲ್ಲೂಕಿನವರು 9.
ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದ ಭೀಮಪ್ಪ ಬೆಳೆನಾಶ ಹಾಗೂ ಬೆಂಬಲ ಬೆಲೆ ಕುಸಿತದ ಕಾರಣ ಸಾಲ ತೀರಿಸಲಾಗದೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಹಾನಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ನೋಡಿ, ಶವಪರೀಕ್ಷೆಗೆ ಅಪ್ಪಣೆ ಕೊಡಿಸಬೇಕೆಂದು ತಹಸೀಲ್ದಾರರನ್ನು ಗ್ರಾಮಸ್ಥರು ಕೇಳಿಕೊಂಡರು. ಗ್ರಾಮಸ್ಥರ ಕರೆಗೆ ತಹಸೀಲ್ದಾರ್ ತಕ್ಷಣ ಸ್ಪಂದಿಸಲಿಲ್ಲ. ಈ ಕಾರಣ ಕ್ರುದ್ಧರಾದ ಗ್ರಾಮಸ್ಥರು ಅಡೂರ್ ಪೊಲೀಸ್ ಠಾಣೆಯನ್ನು ಘೕರಾವ್ ಮಾಡಿದರು. ತಾಲ್ಲೂಕು ಮ್ಯಾಜಿಸ್ಟ್ರೇಟ್ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಅಂದಹಾಗೆ, ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆ ಹಾವೇರಿ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...