ಮಂಗಳೂರು ವಿವಿಯಲ್ಲಿ ಮಾಧ್ಯಮ ಕುರಿತ ರಾಷ್ಟ್ರೀಯ ಸೆಮಿನಾರ್
ಮಂಗಳೂರು : ‘ಭಾರತೀಯ ಮಾಧ್ಯಮಗಳಲ್ಲಿ ಬದಲಾಗುತ್ತಿರುವ ವಿವಾದಾಂಶಗಳು’ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳೂರು ವಿಶ್ವ ವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಆಯೋಜಿಸಿದೆ.
ಡಿಸೆಂಬರ್ 21 ಮತ್ತು 22ರಂದು ನಡೆಯುವ ಈ ವಿಚಾರ ಸಂಕಿರಣವನ್ನು ಮಾಹೆ ವಿಶ್ವವಿದ್ಯಾಲಯದ ಉಪಕುಲಪತಿ ಬಿ. ಎಂ. ಹೆಗ್ಡೆ ವಿಚಾರ ಸಂಕಿರಣವನ್ನು ಉದ್ಘಾಟಿಸುವರು ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕೆ.ವಿ. ನಾಗರಾಜ್ ಅವರ ಪ್ರಕಟಣೆ ತಿಳಿಸಿದೆ.
ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ನ ನಿವೃತ್ತ ಪ್ರಾಧ್ಯಾಪಕ ಎಂ. ಆರ್. ಡುಅ ಅವರು ವಿಚಾರ ಸಂಕಿರಣದ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿವಿಯ ಉಪಕುಲಪತಿ ಪ್ರೊ. ಬಿ. ಹನುಮಯ್ಯ ವಹಿಸುವರು.
‘ಮುಕ್ತ ಆರ್ಥಿಕ ವಲಯದಲ್ಲಿ ಸಮೂಹ ಮಾಧ್ಯಮ ಮತ್ತು ಸಮೂಹ ಆಂದೋಳನಗಳು’, ‘ಮಾಧ್ಯಮ, ಮಾರುಕಟ್ಟೆ ಮತ್ತು ಕಾನೂನು’, ‘ಮಾಧ್ಯಮ ಮತ್ತು ಲಿಂಗ ತಾರತಮ್ಯ ಪ್ರಕರಣಗಳು’ , ‘ರಾಷ್ಟ್ರೀಯ ಅಭಿವೃದ್ಧಿಯತ್ತ ಮಾಧ್ಯಮ ನೀಡುವ ಪ್ರಾಮುಖ್ಯತೆ’ ಮತ್ತು ‘ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು ಕ್ಷೇತ್ರದಲ್ಲಿನ ಬದಲಾವಣೆಗಳು’ ಎಂಬ ವಿಷಯಗಳ ಬಗ್ಗೆ ವಿಚಾರ ಸಂಕಿರಣದಲ್ಲಿ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಹಿರಿಯ ಶಿಕ್ಷಣ ತಜ್ಞರು, ಮಾಧ್ಯಮ ಪ್ರತಿನಿಧಿಗಳು, ಮತ್ತು ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಮಂದಿ ಈ ಸಂಕಿರಣದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...