ನಿಸರ್ಗ ಸೌಂದರ್ಯ ಅರಸಿ ಸಹ್ಯಾದ್ರಿಯತ್ತ ಹೊರಟ ಯುವಕರು
ಉಡುಪಿ : ಇಲ್ಲಿನ ಯೂಥ್ ಹಾಸ್ಟೆಲ್ಸ್ ಆಫ್ ಇಂಡಿಯಾ ರಾಜ್ಯಮಟ್ಟದ ಐದು ದಿನಗಳ ಚಾರಣ ಅಭಿಯಾನವನ್ನು ಡಿಸೆಂಬರ್ 25ರಿಂದ ಕುದುರೆಮುಖ ವ್ಯಾಪ್ತಿಯ ಮಾಳಮಲ್ಲಾರ್ನಿಂದ ಆರಂಭಿಸಲಿದೆ.
ಜಿಲ್ಲಾಪಂಚಾಯತ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಅಭಿಯಾನವನ್ನು ಸಂಯೋಜಿಸಲಾಗಿದ್ದು, ರಾಜ್ಯದ ಸುಮಾರು 100ಕ್ಕೂ ಹೆಚ್ಚು ಮಂದಿ ಚಾರಣದಲ್ಲಿ ಮೂರು ತಂಡಗಳಲ್ಲಿ ಭಾಗವಹಿಸುತ್ತಾರೆ. ಮಾಳಮಲ್ಲಾರ್ನಿಂದ ಆರಂಭಗೊಳ್ಳುವ ಚಾರಣ, ಕೊಚ್ಚಿ, ಕುರಿಂಜಾಲು ಪರ್ವತದಲ್ಲಿ ಎರಡು ಶಿಬಿರ ಹೂಡಲಿದೆ. ಅನಂತರ ಭಗವತೀ ನಿಸರ್ಗಧಾಮದಲ್ಲಿ ಸಮಾರೋಪ ಸಮಾರಂಭದೊಂದಿದೆ ಚಾರಣ ಮುಕ್ತಾಯವಾಗುವುದು.
ರಾಜ್ಯ ಮಟ್ಟದ ಚಾರಣದ ಧ್ಯೇಯವಾಕ್ಯ ಭವಿಷ್ಯಕ್ಕಾಗಿ ಪ್ರಕೃತಿಯನ್ನು ರಕ್ಷಿಸಿ ಎಂಬುದು. ಪಶ್ಚಿಮ ಘಟ್ಟದಲ್ಲಿ ದಿನೇ ದಿನೇ ಅಳಿಯುತ್ತಿರುವ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಮಹಾತ್ವಾಕಾಂಕ್ಷೆ ಚಾರಣಿಗರದು. ಯೂಥ್ ಹಾಸ್ಟೆಲ್ ಸತತ ನಾಲ್ಕು ವರ್ಷಗಳ ಕಾಲ ಇಂತಹ ರಾಜ್ಯಮಟ್ಟದ ಚಾರಣವನ್ನು ಆಯೋಜಿಸಿದ್ದು, ಸಾಹಸ ಮನೋಭಾವವನ್ನು ಪ್ರೋತ್ಸಾಹಿಸುವುದು ಹಾಸ್ಟೆಲ್ನ ಉದ್ದೇಶ ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...