ರಸ್ತೆ ಯಲ್ಲಿ ಉಗುಳುವ ಬುದ್ಧಿಜೀವಿಗಳ ಬಗ್ಗೆಎಸ್.ಎಂ.ಕೃಷ್ಣ ಟೀಕೆ
ಬೆಂಗಳೂರು: ರಸ್ತೆಗಳಲ್ಲಿ ಉಗುಳುವ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ವಾಹನ ಸಂಚಾರಕ್ಕಾಗಿ ಹಸಿರು ದೀಪ ಇದ್ದಾಗ ರಸ್ತೆ ದಾಟುವ ಬುದ್ಧಿಜೀವಿಗಳು ನಮ್ಮ ನಡುವಿದ್ದಾರೆ. ಇವರು ಬೆಂಗಳೂರನ್ನು ಮುಖ್ಯಮಂತ್ರಿ ಕೃಷ್ಣ ಸಿಂಗಪೂರ್ ಮಾಡುತ್ತಾರೆ ಎಂದು ಗೇಲಿ ಮಾಡಿದರು. ಆದರೆ, ಅವರಾರಿಗೂ ನನ್ನ ಹೇಳಿಕೆಯೇ ಅರ್ಥವಾಗಿಲ್ಲ.
ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ವಿಶ್ವಾಸಾರ್ಹತೆ, ಏಕತೆ ಸಾಧಿಸಲು ಪಾಲುದಾರಿಕೆ ಎನ್ನುವ ವಿಷಯದ ಕುರಿತು ಭಾನುವಾರ ಬೆಂಗಳೂರಿನಲ್ಲಿ ಜರುಗಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ತಮ್ಮ ಸಿಂಗಪೂರ್ ಹೇಳಿಕೆಗೆ ವಿಪರೀತಾರ್ಥ ಕಲ್ಪಿಸಿದ ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಿಂಗಪೂರ್ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬೇಕೆಂದು ನಾನು ಹೇಳಿದ್ದೆ . ಈ ಹೇಳಿಕೆಯನ್ನು ಸಾಮಾನ್ಯ ಜನತೆ ಟೀಕಿಸಿದ್ದರೆ ಪರವಾಗಿರಲಿಲ್ಲ . ಆದರೆ, ಸಮಾಜದ ಪ್ರಮುಖ ಸ್ಥಾನಗಳಲ್ಲಿರುವ ವ್ಯಕ್ತಿಗಳು ಬೇಜವಾಬ್ದಾರಿಯಿಂದ ಮಾತನಾಡಿದರು ಎಂದು ವಿಷಾದಿಸಿದ ಕೃಷ್ಣ - ತಮ್ಮ ಸರ್ಕಾರ ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ನಗರವಾಗಿ ಅಭಿವೃದ್ಧಿಪಡಿಸಲು ಬದ್ಧವಾಗಿದೆ ಎಂದರು.
ನಾಗರಿಕರಲ್ಲಿ ಸಾಮಾಜಿಕ ಹೊಣೆಗಾರಿಕೆ, ಬದ್ಧತೆ ಇರಬೇಕು. ನಾಗರಿಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಮೂಲಕ ಬೆಂಗಳೂರು ನಗರದ ಅಭಿವೃದ್ಧಿ ಸಾಧಿಸಬೇಕಾಗಿದೆ. ಬೆಂಗಳೂರಿಗೆ ಒಂದು ವರ್ಚಸ್ಸನ್ನು ಕಲ್ಪಿಸುವಲ್ಲಿ ನಾಗರಿಕ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಮಹತ್ವದ್ದಾಗಿದ್ದು , ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ವಿಶ್ವಾಸಾರ್ಹತೆ ಸಾಧನೆಗೆ ಸಮಾಜ ಹಾಗೂ ಸರ್ಕಾರಿ ಸಂಸ್ಥೆಗಳ ನಡುವೆ ಹೊಂದಾಣಿಕೆಯಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಆತಂಕದ ಅಂಚಿನಲ್ಲಿ ಜಗತ್ತು, ಅವನತಿಯತ್ತ ಸಮಾಜ
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಮನ್ವೆಲ್ತ್ ಪ್ರತಿಷ್ಠಾನದ ನಿರ್ದೇಶಕ ಕಾಲಿನ್ ಬಾಲ್ ಸೆ.11 ರ ನಂತರ ವಿಶ್ವ ಆತಂಕದ ಅಂಚಿನಲ್ಲಿ ಬದುಕುತ್ತಿದೆ. ಸ್ಪಂದನ ಕಳಕೊಂಡ ಸಮಾಜ ಅವನತಿಯತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೃದಯಶಾಸ್ತ್ರ ಕುರಿತ ವಿಡಿಯೋ ಕೆಸೆಟ್ಟನ್ನು ಅವರು ಬಿಡುಗಡೆ ಮಾಡಿದರು. ಇದೇ ಸುರುಳಿಯ ಕನ್ನಡ ಅವತರಣಿಕೆಯನ್ನು ಉನ್ನತ ಶಿಕ್ಷಣ ಸಚಿವ ಡಾ। ಜಿ.ಪರಮೇಶ್ವರ ಬಿಡುಗಡೆ ಮಾಡಿದರು.
ಕಾಮನ್ವೆಲ್ತ್ ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಕ್ರಿಸ್ ಮಾಲ್ಟೆನೊ, ಪ್ರೊ. ಡೇವಿಡ್ ಹಾರ್ವೆ, ಮಾಜಿ ಕೇಂದ್ರ ಸಚಿವ ವಸಂತ್ ಸಾಠೆ ಹಾಗೂ ರಾಜೀವ್ಗಾಂಧಿ ಆರೋಗ್ಯ ವಿವಿ ಕುಲಪತಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ