ದೇವೇಗೌಡರೆಂಬ ಐರಾವತವೂ ಉಗ್ರಪ್ಪನೆಂಬ ಪಮೇರಿಯನ್ ಮರಿಯೂ

ದೇವೇಗೌಡರ ಪ್ರಾಯಶ್ಚಿತ್ತ ಪಾದಯಾತ್ರೆ ಗುರುವಾರ ಬೆಂಗಳೂರಿನಲ್ಲಿ ಕೊನೆಗೊಂಡಿತಲ್ಲ - ಅದೇ ಗುರುವಾರ ರಾಜ್ಯೋತ್ಸವದ ದಿನ ಶಿವಾಜಿನಗರದಲ್ಲಿ ನಡೆದ ಬಹಿರಂಗ ಸಮಾವೇಶ ಕೃಷ್ಣ ಸರ್ಕಾರವನ್ನು ಹೀಗಳೆವ ವೇದಿಕೆಯಾಗಿತ್ತು . ಸಭೆಯ ಕೇಂದ್ರಬಿಂದು ಎಂದಿನಂತೆ ಗೌಡರೇ ಆದರೂ, ವೇದಿಕೆಯಲ್ಲಿ ಮಿಂಚಿದ್ದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಚ್. ಶ್ರೀನಿವಾಸ್. ಮಾತುಗಾರರಾದರೂ ಸಜ್ಜನ ಎಂದೇ ಹೆಸರಾದ ಅವರು ಸಿಎಂ ಕೃಷ್ಣ ಅವರನ್ನು ಏಕವಚನದಲ್ಲಿ ಬಯ್ಯಲು ಹಿಂಜರಿಯಲಿಲ್ಲ. ವಿರೋಧಿಗಳನ್ನು ತೆಗಳಲು ಶ್ರೀನಿವಾಸ್ ಬಳಸಿದ ಭಾಷೆ ಜನರಿಗೆ ರಂಜನೆ ಒದಗಿಸಿತು. ನೀವೂ ಓದಿ..
ಪ್ರಸಂಗ - 1
ದೇವೇಗೌಡರೆಂದರೆ ಏನೆಂದುಕೊಂಡಿದೀರಿ. ಅವರು ಆನೆ. ಕಾಡುಮಂತ್ರಿ ರಂಗನಾಥರ ಡಿಪಾರ್ಟ್ಮೆಂಟ್ ಆನೆಯಂತಲ್ಲ ; ಗೌಡರು ಇಂದ್ರನ ವಾಹನ ಐರಾವತದಂಥ ಆನೆ. ಸರ್ಕಾರಿ ಆನೆ ಹುಲ್ಲು ತಿಂದು, ಜಂಬೂಸವಾರಿಯಲ್ಲಿ ಅರಮನೆಯ ಅಂಬಾರಿ ಹೊರುತ್ತದೆ. ಆದರೆ, ನಮ್ಮೀ ಐರಾವತ ತಲೆಯ ಮೇಲೆ ಕೂರಿಸಿಕೊಳ್ಳುವುದು ರೈತರನ್ನು ಹಾಗೂ ಬಡಜನರನ್ನು. ಐರಾವತ ಇಡುತ್ತಿರುವ ಹೆಜ್ಜೆಗಳಿಗೆ ಸರ್ಕಾರ ಗಡಗಡ ನಡುಗಿ ಹೋಗಿದೆ.
ಪ್ರಸಂಗ - 2
ಗೌಡರ ಮನೆಯಲ್ಲಿ ಕುಂಯ್ ಕುಂಯ್ ಅನ್ನುತ್ತಿದ್ದ ಪಮೇರಿಯನ್ ಮರಿಗಳೆಲ್ಲ ಬೌ ಬೌ ಅನ್ನಲಿಕ್ಕೆ ಶುರುವಿಟ್ಟುಕೊಂಡಿವೆ. ನಮ್ಮ ಐರಾವತ ಒಮ್ಮೆ ಸೊಂಡಿಲು ಬೀಸಿದರೆ ಸಾಕು ಉಗ್ರಪ್ಪ, ಶಿವಕುಮಾರ್ನಂಥ ಪಮೇರಿಯನ್ಗಳು ಎಲ್ಲೆಲ್ಲಿ ಬೀಳುತ್ತವೋ.. ಇದೇ ಉಗ್ರಪ್ಪನನ್ನು ಎಂಎಲ್ಸಿ ಮಾಡಿದ್ದು ನಮ್ಮ ಗೌಡರೇ.
ಪ್ರಸಂಗ - 3
ಮಣ್ಣಿನ ಮಗ ಅನ್ನೋದು ದೇವೇಗೌಡರಿಗೆ ವಿಶ್ವ ವಿದ್ಯಾಲಯ ಕೊಟ್ಟ ಬಿರುದಲ್ಲ , ರೈತರು ಕೊಟ್ಟ ಬಿರುದು. ಮಣ್ಣಿನ ಮಗ ಅಂದರೆ ಕೆಲವರಿಗೆ ಕಣ್ಣು ಕೆಂಪಾಗ್ತದೆ. ಇತ್ತೀಚೆಗೆ ಮುಲಾಯಂ ಸಿಂಗ್ ಯಾದವ್ ಬೆಂಗಳೂರಿಗೆ ಬಂದಿದ್ದರಲ್ಲ , ಅವರು ಗೌಡರನ್ನು ಭಾರತದ ಮಣ್ಣಿನ ಮಗ ಅಂದರು. ಇಪ್ಪತ್ತೆೈದು ಎಸ್.ಎಂ.ಕೃಷ್ಣ ಹಾಕಿದರೆ ಒಬ್ಬ ಮುಲಾಯಮ್ಮು. ಅಂಥವರೇ ಮಣ್ಣಿನ ಮಗ ಅಂದಮೇಲೆ ಇವರದೆಲ್ಲ ಯಾವ ಲೆಕ್ಕ.
ಪ್ರಸಂಗದೊಳಗಿನ ಉಪ ಪ್ರಸಂಗಗಳು
* ಕೇಂದ್ರದಲ್ಲಿರುವುದು ಬೈಠಕ್ ಸರ್ಕಾರ, ರಾಜ್ಯದ್ದು ಹೈಟೆಕ್ ಸರ್ಕಾರ. ಒಟ್ಟಿನಲ್ಲಿ ಎರಡೂ ಠಕ್ಕು ಸರ್ಕಾರಗಳೇ.
* ಇನ್ನೊಮ್ಮೆ ರೈತರ ಮೇಲೆ ದೊಣ್ಣೆ ಎತ್ತಿದರೆ, ಎತ್ತಿದವರ ಬುರುಡೆ ಕಾಯಿಸುತ್ತೇವೆ.
* ಪಾದಯಾತ್ರೆಯನ್ನು ಜಾತಿಯ ಹೋರಾಟ, ರಾಜಕೀಯ ಸ್ಟಂಟ್ ಅನ್ನುವವರ ಬಾಯಿಗೆ ಹುಳು ಬೀಳುತ್ತದೆ.












Click it and Unblock the Notifications