ಕಿಡ್ನಿ ವೈಫಲ್ಯ, ಕ್ಯಾನ್ಸರ್, ಹೃದ್ರೋಗ ಪೀಡಿತರ ನೆರವಿಗೆ ಶ್ರೀಕೃಷ್ಣ ಪ್ರತಿಷ್ಠಾನ
ಬೆಂಗಳೂರು : ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್, ಹೃದ್ರೋಗವೇ ಮೊದಲಾದ ತೀವ್ರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ (ಆರ್ಥಿಕವಾಗಿ ಹಿಂದುಳಿದ) ರೋಗಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ನಗರದಲ್ಲೊಂದು ಸೇವಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ.
ಶ್ರೀಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸ್ಥಾಪಿಸಲ್ಪಟ್ಟಿರುವ ಶ್ರೀಕೃಷ್ಣ ವೈದ್ಯಕೀಯ ಚಿಕಿತ್ಸಾ ಪ್ರತಿಷ್ಠಾನ ಬಡ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಿದೆ. ತತ್ಸಂಬಂಧವಾಗಿ ಪ್ರತಿಷ್ಠಾನ ಸಾರ್ವಜನಿಕರಿಂದ ಹಾಗೂ ಸಂಘ-ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ ಎರಡು ಕೋಟಿ ರುಪಾಯಿಗಳ ನಿಧಿ ಸ್ಥಾಪಿಸುವ ಉದ್ದೇಶ ಹೊಂದಿದೆ.
ಈ ನಿಧಿಯಿಂದ ದೊರಕುವ ಬಡ್ಡಿ ಹಣದಲ್ಲಿ ಅರ್ಹ ರೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಜಿ. ಸುಬ್ಬಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ 25 ಲಕ್ಷ ರುಪಾಯಿಗಳನ್ನು ಸಂಗ್ರಹಿಸಿರುವ ಪ್ರತಿಷ್ಠಾನ, ಸಂಸ್ಥೆಯ ಧ್ಯೇಯಗಳನ್ನು ಅನುಷ್ಠಾನಗೊಳಿಸಲು ಸಮಿತಿಯಾಂದನ್ನೂ ರಚಿಸಿದೆ.
ಪ್ರತಿಷ್ಠಾನ ಡಿಸೆಂಬರ್ನಿಂದ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡುತ್ತದಾದರೂ, ತತ್ಕ್ಷಣದಿಂದಲೇ ತುರ್ತು ಅಗತ್ಯ ಇರುವ ರೋಗಿಗಳಿಗೆ ನೆರವು ನೀಡಲು ನಿರ್ಧರಿಸಿದೆ. ಪ್ರಸ್ತುತ ಪ್ರತಿಷ್ಠಾನದ ಕಾರ್ಯವ್ಯಾಪ್ತಿಯನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಉತ್ತರೋತ್ತರದಲ್ಲಿ ಮುಂಬೈ, ಚೆನ್ನೈಮೊದಲಾದ ನಗರಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಪ್ರತಿಷ್ಠಾನಕ್ಕಿದೆ.
ತೆರಿಗೆ ವಿನಾಯ್ತಿ : ಬಡ ರೋಗಿಗಳ ನೆರವಿಗೆ ನಿಂತಿರುವ ಈ ಪ್ರತಿಷ್ಠಾನಕ್ಕೆ ನೀಡಲಾಗುವ ದೇಣಿಗೆ- ವಂತಿಕೆಗೆ ಆದಾಯ ತೆರಿಗೆ ವಿನಾಯ್ತಿ ದೊರಕಲಿದೆ. ಪ್ರತಿಷ್ಠಾನಕ್ಕೆ ದೇಣಿಗೆ ನೀಡಲಿಚ್ಛಿಸುವವರು ಚೆಕ್ ಅಥವಾ ಡಿ.ಡಿಯನ್ನು ಜನತಾ ಕಲ್ಯಾಣ ನಿಧಿ ಎ-ಸಿ ಶ್ರೀಕೃಷ್ಣ ವೈದ್ಯಕೀಯ ಚಿಕಿತ್ಸಾ ಪ್ರತಿಷ್ಠಾನದ ಹೆಸರಿಗೆ ಕಳುಹಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ.ಜೆ. ಬಾಗಿಲ್ತಾಯ ತಿಳಿಸಿದರು.
ಪ್ರತಿಷ್ಠಾನದಿಂದ ಆರ್ಥಿಕ ನೆರವು ಪಡೆಲಿಚ್ಛಿಸುವ ರೋಗಿಗಳು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಜಿ. ಸುಬ್ಬಣ್ಣ ಅವರನ್ನು ದೂರವಾಣಿ ಸಂಖ್ಯೆ 080- 6341631, 6554280, 6636312(ಮನೆ) ಮೂಲಕ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಬೆಂಬಲ : ಪ್ರತಿಷ್ಠಾನದ ಈ ಮಹತ್ತರ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಬೆಂಗಳೂರು ಕಿಡ್ನಿ ಫೌಂಡೇಷನ್ನ ಡಾ. ವೆಂಕಟೇಶ್, ಬೆಂಗಳೂರು ಕ್ಯಾನ್ಸರ್ ಸಂಸ್ಥೆಯ ಡಾ. ಶ್ರೀನಾಥ್, ಡಾ. ಯು. ವಸುದೇವರಾವ್, ಡಾ. ಬಿ.ಎಸ್. ಮಂಜುನಾಥ್, ಡಾ. ರಾಘವೇಂದ್ರರಾವ್, ಪ್ರತಿಷ್ಠಾನದ ಸದಸ್ಯ ಎಸ್.ಕೆ. ಭಟ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)