ಬೆಂಗಳೂರಿನಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಕಾಫಿ ಉತ್ಸವ
ಬೆಂಗಳೂರು : ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬರುವ ವರ್ಷದ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ಅಂತರ ರಾಷ್ಟ್ರೀಯ ಕಾಫಿ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ವೆಬ್ಸೈಟ್ನ್ನು ರಾಜ್ಯಪಾಲರಾದ ವಿ.ಎಸ್. ರಮಾದೇವಿ ಉದ್ಘಾಟಿಸಿದರು.
ರಾಜ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ರಮಾದೇವಿಯವರು www.iicf2002.comವೆಬ್ಸೈಟ್ಗೆ ಚಾಲನೆ ನೀಡಿದರು. ನಗರದಲ್ಲಿ ಫೆಬ್ರವರಿ 15ರಿಂದ 17ರವರೆಗೆ ನಡೆಯುವ ಕಾಫಿ ಉತ್ಸವದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟ ದ ಕಾಫಿ ಉದ್ದಿಮೆಗಳು ಭಾಗವಹಿಸಲಿವೆ.
ಭಾರತದ ಕಾಫಿ ತಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡುವುದು, ಭಾರತೀಯ ಕಾಫಿ ತಳಿಗಳ ಪ್ರದರ್ಶನ, ಮಾರುವವರು ಮತ್ತು ಕೊಳ್ಳುವವರನ್ನು ಒಂದೇ ವೇದಿಕೆಯಡಿ ಸೇರಿಸುವುದು ಈ ಉತ್ಸವದ ಉದ್ದೇಶವಾಗಿದೆ. ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಸುಮಾರು 100ಕ್ಕೂ ಹೆಚ್ಚು ವಿದೇಶೀ ಉದ್ಯಮ ಪ್ರತಿನಿಧಿಗಳು ಸೇರಿದಂತೆ ಒಟ್ಟು 700 ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲರು ‘ಐ ಲವ್ ಕಾಫಿ’ ಎನ್ನುತ್ತಾ ಕಾಫಿ ಬಗೆಗಿನ ತಮ್ಮ ಆಸಕ್ತಿಯನ್ನು ಹೇಳಿಕೊಂಡರು. ಆದರೆ ಕಾಫಿ ಬೆಳೆಗಾರ, ಮಧ್ಯವರ್ತಿಯ ಶೋಷಣೆಯಿಂದ ಬೆಳೆಗೆ ಸೂಕ್ತ ಬೆಲೆ ಪಡೆಯುತ್ತಿಲ್ಲ. ಗ್ರಾಹಕರು ಮತ್ತು ಬೆಳೆಗಾರರು ಮೋಸ ಹೋಗಿ ನಷ್ಟ ಅನುಭವಿಸುತ್ತಿರುತ್ತಾರೆ ಎಂದ ರಾಜ್ಯಪಾಲರು ಕೆಲವು ಸಲಹೆಗಳನ್ನು ಮುಂದಿಟ್ಟರು :
- ಗುಣ ಮಟ್ಟ ದ ಕಡೆಗೆ ಕಾಫಿ ಮಂಡಳಿ ಗಮನ ಹರಿಸಬೇಕು. ಯಾಕೆಂದರೆ ವಿದೇಶದಲ್ಲಿ ಮತ್ತು ಉತ್ತರ ಭಾರತದಲ್ಲಿಯೂ ಜನರು ಕಾಫಿಯನ್ನು ಇಷ್ಟಪಡಲಾರಂಭಿಸಿದ್ದಾರೆ.
- ಕಾಫಿ ಮಂಡಳಿಯ ಮಾರಾಟ ಕೇಂದ್ರಗಳಲ್ಲಿ ಕಾಫಿ ಜೊತೆ ಗ್ರಾಹಕರಿಗೆ ದೋಸೆ ಕೂಡ ದೊರೆಯುವಂತಾಗಬೇಕು. ಇದು ವ್ಯಾಪಾರದ ಗುಟ್ಟು.
- ಮಾರಾಟ, ವಿತರಣಾ ವ್ಯವಸ್ಥೆಯಲ್ಲಿನ ದೋಷಗಳ ನಿವಾರಣೆಯೇ ಬೆಲೆ ಕುಸಿತಕ್ಕೆ ಮದ್ದು.
- ಮಧ್ಯವರ್ತಿಯ ಕಾಟದಿಂದ ಗ್ರಾಹಕನನ್ನು ಮತ್ತು ಬೆಳೆಗಾರನನ್ನು ಬಚಾವ್ ಮಾಡಲು, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು.
-
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...