ರೆಚ್ಚೆ ಮಳೆ ಕಾಣಬೇಕಿದ್ದ ವಿರಾಜಪೇಟೆಗೆ ಬರಪೀಡಿತ ತಾಲ್ಲೂಕಿನ ಪಟ್ಟ
ಮಡಿಕೇರಿ: ಹನಿ ಕಡಿಯದೇ ಮಳೆ ಸುರಿಯುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿಗೆ ಈ ಬಾರಿ ಬರಪೀಡಿತ ತಾಲ್ಲೂಕು ಎಂಬ ಪಟ್ಟ.
ಕರ್ನಾಟಕರಾಜ್ಯ ಸರಕಾರವು ವಿರಾಜಪೇಟೆ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಿದ್ದು , ವಿವಿಧ ಯೋಜನೆಗಳಿಗಾಗಿ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಜಿ.ಇ. ರಾಮಚಂದ್ರ ಹೇಳಿದ್ದಾರೆ. ಕೂಲಿಗಾಗಿ ಕಾಳು ಯೋಜನೆಯನ್ನು ಜಾರಿಗೆ ತರುವ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡುತ್ತಿದ್ದ ರಾಮಚಂದ್ರ ಅವರು ಈ ವಿಷಯ ತಿಳಿಸಿದರು.
ಕೂಲಿಗಾಗಿ ಕಾಳು ಯೋಜನೆಯ ಪ್ರತಿಯಾಬ್ಬ ಕೆಲಸಗಾರನಿಗೂ ಪ್ರತಿ ದಿನ 46.25 ರೂಪಾಯಿ ಮತ್ತು ನಾಲ್ಕು ಕೆಜಿ ಅಕ್ಕಿ ಹಾಗೂ ಗೋಧಿಯನ್ನು ನೀಡಲಾಗುವುದು. ತಾಲ್ಲೂಕಿನಲ್ಲಿ ಮೇವಿನ ಕೊರತೆಯೇನೂ ಕಂಡು ಬಂದಿಲ್ಲ . ಆದರೂ ಅಗತ್ಯ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಖಾತೆಯ ಉಪನಿರ್ದೇಶಕರು ಭರವಸೆ ನೀಡಿದ್ದಾರೆ.
ಈ ನಡುವೆ ತಾಲ್ಲೂಕಿನಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರದಿಂದ 2.87 ಕೋಟಿ ರೂಪಾಯಿಗಳ ಸಹಾಯ ಕೋರಲಾಗಿದೆ ಎಂದು ಯೋಜನಾ ಮಂತ್ರಿ ಸುಮಾ ವಸಂತ್ ಹೇಳಿದ್ದಾರೆ. ತಾಲ್ಲೂಕಿನಲ್ಲಿ ಹೆಚ್ಚಿನವರು ಕೃಷಿಯನ್ನೇ ನಂಬಿಕೊಂಡಿದ್ದು ಈ ಬಾರಿ ಅತಿ ಕಡಿಮೆ ಮಳೆ ಬಿದ್ದಿರುವುದರಿಂದ ಸಾಕಷ್ಟು ಪ್ರಮಾಣದ ಬೆಳೆ ತೆಗೆಯುವುದು ಸಾಧ್ಯವಾಗಿಲ್ಲ.
(ಇನ್ಫೋ ವಾರ್ತೆ)