ರಾಣೆಬೆನ್ನೂರಿನ ಬೃಹತ್ ಬಸ್ ನಿಲ್ದಾಣಕ್ಕೆ ಶೀಘ್ರವೇ ಶಂಕುಸ್ಥಾಪನೆ
ಬೆಂಗಳೂರು : 65 ಲಕ್ಷ ರುಪಾಯಿ ವೆಚ್ಚದಲ್ಲಿ ರಾಣೆಬೆನ್ನೂರಿನಲ್ಲಿ ಬೃಹತ್ ಬಸ್ ನಿಲ್ದಾಣ ನಿರ್ಮಿಸಲು ಸರಕಾರ ಉದ್ದೇಶಿಸಿದ್ದು, ಒಂದು ವಾರದೊಳಗೆ ಅದರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಸಗೀರ್ ಅಹ್ಮದ್ ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಗಳಲ್ಲಿ 45 ಲಕ್ಷ ರುಪಾಯಿ ವೆಚ್ಚದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ನಿರ್ಮಿಸಲೂ ಉದ್ದೇಶಿಸಲಾಗಿದ್ದು, ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವರು ಹೇಳಿದರು. ನಿರ್ಮಾಣ, ನಿರ್ವಹಣೆ ವರ್ಗಾವಣೆ (ಬಿ.ಟಿ.ಓ) ಆಧಾರದ ಮೇಲೆ ರಾಜ್ಯದಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಶೀಘ್ರವೇ ಟೆಂಡರ್ ಕರೆಯಲಾಗುವುದು.
ಪ್ರತಿಯಾಂದು ತಾಲೂಕು ಕೇಂದ್ರದಲ್ಲೂ ಬಸ್ ನಿಲ್ದಾಣ ನಿರ್ಮಿಸುವ ಸಲುವಾಗಿ ಈ ಯೋಜನೆ ಕೈಗೊಳ್ಳಲಾಗಿದೆ ಎಂದರು. ಬೆಂಗಳೂರು ಮಹಾನಗರ ಸಾರಿಗೆಯ ಅನುಕೂಲಕ್ಕಾಗಿ ಖಾಸಗಿಯವರಿಂದ ಬಸ್ಗಳನ್ನು ಗುತ್ತಿಗೆ ಪಡೆದಿರುವಂತೆಯೇ ಈಶಾನ್ಯ ಸಾರಿಗೆ ಸಂಸ್ಥೆಯಲ್ಲೂ ಕಿಲೋ ಮೀಟರ್ಗೆ ರುಪಾಯಿ 10.10ರಂತೆ 200 ಬಸ್ಗಳನ್ನು ಗುತ್ತಿಗೆ ಪಡೆಯಲಾಗುತ್ತಿದೆ. ವಾಯವ್ಯ ಸಾರಿಗೆಯಲ್ಲೂ ಬಸ್ ಗುತ್ತಿಗೆ ಪಡೆಯಲು ಚಿಂತಿಸಲಾಗುತ್ತಿದೆ ಎಂದರು.
ಮೆಟ್ರೋ ಬಸ್ : ಬೆಂಗಳೂರಿನಲ್ಲಿ ಮೆಟ್ರೋ ಬಸ್ ಸಂಚಾರ ಆರಂಭಿಸಲು ಸ್ವೀಡನ್ ಸರಕಾರ ಹಾಗೂ ರಾಜ್ಯ ಸರಕಾರದ ನಡುವೆ ಪತ್ರವ್ಯವಹಾರ ನಡೆದಿದ್ದು, ಅಧಿಕೃತ ಪ್ರಕಟಣೆಯ ಸಮಯಕ್ಕಾಗಿ ಕಾಯುತ್ತಿದ್ದೇವೆ ಎಂದೂ ಸಚಿವರು ತಿಳಿಸಿದರು.