ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ಜೀವಕ್ಕೆ ಬೆಲೆಯಿಲ್ಲ - ಕೋರ್ಟ್ ಆತಂಕ
ಬೆಂಗಳೂರು : ‘ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಜೀವಕ್ಕೆ ಯಾವ ಬೆಲೆಯೂ ಇರುವಂತೆ ಕಾಣದು’ ಎಂದು ತೀವ್ರ ಆತಂಕ ವ್ಯಕ್ತಪಡಿಸಿರುವ ರಾಜ್ಯ ಹೈಕೋರ್ಟ್ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಚಿಕಿತ್ಸೆಯತ್ತ ತೀವ್ರ ನಿಗಾ ವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದೆ.
ಇತ್ತೀಚಿನ ದಿನಗಳಲ್ಲಿ ಪ್ರಕಟವಾಗಿರುವ ವರದಿ, ಸಮೀಕ್ಷೆಗಳು ಸರ್ಕಾರಿ ಆಸ್ಪತ್ರೆಗಳ ಕಾರ್ಯ ವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿರುವ ನ್ಯಾಯಾಲಯ ‘ಕೆಟ್ಟ ಚಿಕಿತ್ಸೆ, ವಿಳಂಬ ಹಾಗೂ ಉದಾಸೀನದಿಂದ ಅಮೂಲ್ಯ ಜೀವ ಹಾನಿ ಸಂಭವಿಸಿರುವ ನಿದರ್ಶನಗಳಿಗೆ ಕೊರತೆಯಿಲ್ಲ ’ ಎಂದು ಅಭಿಪ್ರಾಯಪಟ್ಟಿದೆ.
ತನ್ನ ತಂದೆಯನ್ನು ಇರಿದು ಕೊಂದಿರುವ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬೋಬಾ ಎಂಬಾತ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ.ಎಫ್.ಸಲ್ಡಾನಾ ಹಾಗೂ ಕೆ.ಆರ್. ಪ್ರಸಾದ್ ರಾವ್ ಅವರಿದ್ದ ಜಂಟಿ ನ್ಯಾಯಪೀಠ ಸರ್ಕಾರಿ ಆಸ್ಪತ್ರೆಗಳ ಕಳಪೆ ಚಿಕಿತ್ಸೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಬೋಬಾ ತನ್ನ ತಂದೆಗೆ ಚಿಕ್ಕಪುಟ್ಟ ಗಾಯಗಳನ್ನಷ್ಟೆ ಮಾಡಿದ್ದು , 32 ದಿನ ಸರ್ಕಾರಿ ಆಸ್ಪತ್ರೆಯಲ್ಲಿ ನರಳಿದ ಬೋಬಾನ ತಂದೆ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಮೃತನಾಗಿದ್ದಾನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಜೀವಾವಧಿ ಶಿಕ್ಷೆಯನ್ನು 5 ವರ್ಷಗಳಿಗೆ ಇಳಿಸಿತು.
(ಇನ್ಫೋ ವಾರ್ತೆ)