ಆಡಳಿತ ಮಂಡಳಿ ಕೈಬಿಟ್ಟ ಕಿರ್ಲೋಸ್ಕರ್ಗೆ ನೌಕರರಿಂದ ಮರುಜೀವ
ದಾವಣಗೆರೆ : ಕಿರ್ಲೋಸ್ಕರ್ ಕಾರ್ಖಾನೆಯ ಪುನರ್ ಆರಂಭಕ್ಕೆ ಆಡಳಿತಮಂಡಳಿ ಕೈ ಚೆಲ್ಲಿ ಕುಳಿತಿರುವ ಸಂದರ್ಭದಲ್ಲಿ ಕಾರ್ಮಿಕರೇ ಕಾರ್ಖಾನೆಗೆ ಜೀವ ತುಂಬಲು ಮುಂದಾಗಿದ್ದು, ಈ ಕುರಿತ ಮಹತ್ವದ ಸಭೆ ಜೂನ್ 17ರಂದು ನಡೆಯಲಿದೆ.
ಕಾರ್ಖಾನೆಗೆ ಬೀಗ ಮುದ್ರೆ ಬಿದ್ದ ನಂತರ ಆಡಳಿತ ಮಂಡಳಿ, ಕಾರ್ಮಿಕ ವಲಯ ಹಾಗೂ ಸರಕಾರದ ನಡುವೆ ಹತ್ತಾರು ಸುತ್ತಿನ ಮಾತುಕತೆ ನಡೆದರೂ ಕಾರ್ಮಿಕರ ಕೈಗೆ ಕೆಲಸ ಬರಲಿಲ್ಲ. ಮುಚ್ಚಿದ ಕಾರ್ಖಾನೆ ತೆರೆಯಲಿಲ್ಲ. ಈಗ ಕಾರ್ಮಿಕರೇ ಮುಂದಾಗಿ ಸಹಕಾರಿ ಸಂಘವೊಂದನ್ನು ಸ್ಥಾಪಿಸಿಕೊಂಡು, ಹಿಂದೆ ಕಂಪೆನಿಯ ಉಪಾಧ್ಯಕ್ಷರಾಗಿದ್ದ ಎನ್. ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಕಾರ್ಖಾನೆಗೆ ಮರುಜೀವ ನೀಡುವ ಪ್ರಯತ್ನ ನಡೆಸಿದ್ದಾರೆ.
ಸಚಿವರು ತಥಾಸ್ತು ಅನ್ನಬೇಕು
ಕಾರ್ಮಿಕರ ಈ ನಿರ್ಧಾರವನ್ನು ಉಲ್ಲೇಖಿಸಿ ಭಾರೀ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಪ್ರಯತ್ನ ಯಶಸ್ವಿಯಾದಲ್ಲಿ, ಕಾರ್ಖಾನೆಯ ಒಂದೊಂದೇ ಘಟಕಗಳನ್ನು ಮತ್ತೆ ಆರಂಭಿಸಲಾಗುವುದು.
ಮೊದಲಿಗೆ ಕಾರ್ಖಾನೆಯ ಫೌಂಡ್ರಿ ವಿಭಾಗಕ್ಕೆ ಜೀವ ನೀಡಿ ಅಲ್ಲಿದ್ದ 500 ಮಂದಿ ಕಾರ್ಮಿಕರಿಗೆ ಕೆಲಸ ದೊರಕಿಸಲಾಗುವುದು. ಇನ್ನಿತರ ವಿಭಾಗಗಳನ್ನು ಕ್ರಮೇಣ ತೆರೆಯಲಾಗುವುದು. ಸಹಕಾರ ತತ್ವದಡಿ ಕಾರ್ಖಾನೆಯ ಪುನರ್ ಆರಂಭಕ್ಕೆ ಮುಂದಾಗುತ್ತಿದ್ದಂತೆಯೇ ಬಂಡವಾಳ ಹೂಡುವವರ ಪಟ್ಟಿಯಾಂದನ್ನು ಸಿದ್ಧಪಡಿಸಲಾಗಿದೆ.
ಈ ಸಂಬಂಧ ಕಾರ್ಮಿಕ ಸಭೆ ಜೂನ್ 17ರಂದು ಹರಿಹರದಲ್ಲಿ ನಡೆಯಲಿದ್ದು, ಕಾರ್ಮಿಕರ ಈ ಯೋಜನೆಯ ಅಂತಿಮ ರೂಪು ಸಿಗಲಿದೆ. ಸದ್ಯಕ್ಕೆ ಕಾರ್ಮಿಕರ ಈ ಉತ್ಸಾಹವನ್ನು ಪೋಷಿಸುವಲ್ಲಿ ಕೈಗಾರಿಕಾ ಸಚಿವ ದೇಶಪಾಂಡೆಯವರ ಪ್ರತಿಕ್ರಿಯೆ ಅತಿ ಮುಖ್ಯವಾಗಿದೆ.
(ಇನ್ಫೋ ವಾರ್ತೆ)