ರಾಜ್ಯದ ನೆಲ, ಜಲ ಕುರಿತು ಸರ್ವಪಕ್ಷಗಳ ಸಭೆ ಈ ಹೊತ್ತು ನಡೆದಿದೆ
ಬೆಂಗಳೂರು : ರಾಜ್ಯದ ನೆಲ, ಜಲ ಕುರಿತ ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಗುರುವಾರ ಸಂಜೆ ಕರೆದಿರುವ ಸರ್ವಪಕ್ಷಗಳ ಸಭೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಡಬ್ಲ್ಯುಟಿಓ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳು ಏನು?, ಕೃಷ್ಣ ನದಿ ನೀರಿನ ಬಳಕೆ, ಕೆ.ಎ.ಎಸ್. ಅಧಿಕಾರಿಗಳ ನೇಮಕ ಹಾಗೂ ಆಂಧ್ರ ಪ್ರದೇಶ ಅಕ್ರಮವಾಗಿ ಕೈಗೊಂಡಿರುವ ಫೀಡರ್ ಕಾಲುವೆ ಕಾಮಗಾರಿ ಕುರಿತು ಸರ್ವಪಕ್ಷಗಳ ನಾಯಕರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸುತ್ತಿದ್ದಾರೆ.
ಅಂತಾರಾಜ್ಯ ವಿವಾದಕ್ಕೆ ಕಾರಣವಾಗಿರುವ ನದಿಗಳ ನೀರಿನಲ್ಲಿ ರಾಜ್ಯದ ಪೂರ್ಣ ಪಾಲನ್ನು ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಡಿ.ಬಿ. ಚಂದ್ರೇಗೌಡ, ಟಿ.ಬಿ. ಜಯಚಂದ್ರ, ಪ್ರತಿಪಕ್ಷದ ನಾಯಕರುಗಳಾದ ಡಿ.ಎಸ್. ಶಂಕರಮೂರ್ತಿ, ಎಂ.ಆರ್. ತಂಗಾ, ಸಿದ್ಧರಾಮಯ್ಯ, ಪಿ.ಜಿ.ಆರ್. ಸಿಂಧ್ಯಾ, ಬೈರೇಗೌಡ ಮೊದಲಾದವರು ಪಾಲ್ಗೊಂಡಿದ್ದಾರೆ.