ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು?
ಬೆಂಗಳೂರಿನಲ್ಲಿ (ಕರಗದ ದಿನ) ನಡೆದ ಕೆಂಪೇಗೌಡ ಜನ್ಮ ಜಯಂತಿಯ ದಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಬೇಕು ಎಂದು ಒತ್ತಾಯ ಬಂತು. ಅಂಬೇಡ್ಕರ್ ಜಯಂತಿಯಂದು ಈ ನಿಲ್ದಾಣಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡುವಂತೆ ದಲಿತ ಸಂಘಟನೆಗಳು ಆಗ್ರಹಿಸಿದವು. ಮೂಲತಃ ಕೇರಳದವರಾದ ಆದಿ ಶಂಕರಾಚಾರ್ಯರ ಹೆಸರನ್ನೂ ಕೆಲವರು ಸೂಚಿಸಿದ್ದಾರೆ. ಬಸವ ಜಯಂತಿಯಂದು ಕ್ರಾಂತಿಕಾರಿ ಬಸವಣ್ಣನವರ ಹೆಸರು ಇಡುವಂತೆ ಆಗ್ರಹಿಸಲಾಗಿದೆ.
ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆದ ಮೇಲೆ, ಲಕ್ಷಾಂತರ ಜನ ವಿದೇಶಿಯರು ಇಲ್ಲಿಗೆ ಬರುವ ಕಾರಣ, ಕನ್ನಡದ, ಕನ್ನಡಿಗರ ಹೆಸರನ್ನೇ ಈ ನಿಲ್ದಾಣಕ್ಕೆ ಇಡುವ ಮೂಲಕ ಕಂನಾಡ ಪರಿಮಳವನ್ನು ವಿಶ್ವಾದ್ಯಂತ ಪಸರಿಸಬೇಕು ಎಂಬುದು ಶ್ರೀಸಾಮಾನ್ಯರ ತರ್ಕವಾಗಿದೆ.
ಅಲ್ಲ ಸ್ವಾಮಿ ಕನ್ನಡದ ಅಥವಾ ಕನ್ನಡಿಗರ ಹೆಸರು ಕರ್ನಾಟಕದ ವಿನಾ ಮತ್ತಾವುದೇ ರಾಜ್ಯದ ರಸ್ತೆ, ಅಥವಾ ವೃತ್ತ ಇಲ್ಲ ನಗರಕ್ಕೆ ಇದೆಯೇ? ಹೋಗಲಿ ರಾಷ್ಟ್ರದ ರಾಜಧಾನಿಯಲ್ಲಾದರೂ ಇದೆಯೇ? ಇಲ್ಲ ಎಂದ ಮೇಲೆ ನಾವೇಕೆ ಬೇರೆ ರಾಜ್ಯದವರ ಹೆಸರನ್ನು ನಮ್ಮ ರಾಜ್ಯದಲ್ಲಿ ಇಡಬೇಕು? ಎಂಬುದು ಕನ್ನಡಾಭಿಮಾನಿಗಳ ಪ್ರಶ್ನೆ. ಈಗಾಗಲೇ, ಕಸ್ತೂರ ಬಾ, ಗಾಂಧೀ, ನೆಹರು, ರಾಜೀವ್ಗಾಂಧೀ, ಇಂದಿರಾಗಾಂಧೀ, ಲಾಲ್ ಬಹದ್ದೂರ್ ಶಾಸ್ತ್ರೀ, ರವೀಂದ್ರನಾಥ ಟಾಗೋರ್, ರಾಜಾಜಿ, ಸುಭಾಷ್ ಚಂದ್ರಭೋಸ್, ಛತ್ರಪತಿ ಶಿವಾಜಿ, ಜಾನ್ಸೀರಾಣಿ ಲಕ್ಷ್ಮೀಬಾಯಿ ಮೊದಲಾದವರ ಹೆಸರುಗಳು ರಾಜ್ಯದ ಹಲವು ಪ್ರಮುಖ ರಸ್ತೆಗಳು, ನಗರಗಳು ಹಾಗೂ ವೃತ್ತಗಳನ್ನು ಆಕ್ರಮಿಸಿಯಾಗಿದೆ. ಇಷ್ಟಾದ ಮೇಲೂ ಮತ್ತೊಂದು ಹೊರರಾಜ್ಯದ ಹೆಸರಿನ ಅಗತ್ಯವಿದೆಯೆ?
ಹೊಸ ವಿವಾದ: ಈಗ ಕಾರವಾರದ ಕಡಲ ತೀರಕ್ಕೆ ರವೀಂದ್ರನಾಥ್ ಟಾಗೋರ್ ಅವರ ಹೆಸರಿಡಲು ಅಲ್ಲಿನ ಜಿಲ್ಲಾಡಳಿತ ನಿರ್ಧರಿಸಿದ್ದು , ಈ ಕುರಿತು ಸಾರ್ವಜನಿಕರ ಆಭಿಪ್ರಾಯಗಳನ್ನು ಜಿಲ್ಲಾಧಿಕಾರಿ ನಿಲಯ ಮಿತಾಶ್ ಕೋರಿದ್ದಾರೆ.
ರವೀಂದ್ರನಾಥ ಟಾಗೋರ್ ಅವರ ಸೋದರ 1882ರಲ್ಲಿ ಕಾರವಾರದಲ್ಲಿದ್ದಾಗ ಟಾಗೋರರು ಇಲ್ಲಿಗೆ ಬಂದಿದ್ದರು, ಕಾರವಾರವನ್ನು ಮನಸಾರೆ ಹೊಗಳಿದ್ದರು, ಇಲ್ಲಿ ಕೃತಿ ರಚಿಸಿದ್ದರು. ಅಷ್ಟಕ್ಕೇ ಅವರ ಹೆಸರೇಕೆ ಇಡಬೇಕು? ಎಂಬುದು ಸಹಜವಾಗಿ ಎದ್ದಿರುವ ಪ್ರಶ್ನೆ.
ಕಡಲತೀರದ ಭಾರ್ಗವ ಎಂದೇ ಹೆಸರಾದ ಹಾಗೂ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶಿವರಾಮ ಕಾರಂತರ ಹೆಸರೇಕೆ ಇಡಬಾರದು, ನಮ್ಮ ರಾಷ್ಟ್ರ ಕವಿ ಕುವೆಂಪು ಅವರ ಹೆಸರಿಟ್ಟರಾಗದೇ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವವರಿಲ್ಲ. ಮೂಲತಃ ಬಂಗಾಳದವರಾದ ಜಿಲ್ಲಾಧಿಕಾರಿ, ಟಾಗೋರರ ಹೆಸರಿಡಲು ಸಲ್ಲದ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.
ಇಂಗ್ಲೆಂಡ್, ಜಪಾನ್, ಪ್ಯಾರೀಸ್, ಅಮೆರಿಕ ಅಥವಾ ಭಾರತದ ಹೊರಗಿನ ಯಾವುದಾದರೂ ಪ್ರತಿಷ್ಠಿತ ರಸ್ತೆಗೆ, ವೃತ್ತಕ್ಕೆ ಇಲ್ಲವೇ ನಗರಕ್ಕೆ ಟಾಗೋರ್ ಸೇರಿದಂತೆ ಇನ್ನಾವುದೇ ಭಾರತೀಯನ ಹೆಸರು ಇಟ್ಟರೂ ಸಂತೋಷ ಪಡೋಣ ಅದು ಬಿಟ್ಟು, ಭಾರತದಲ್ಲಿ ಯಾವುದೋ ಬೀಚ್ಗೆ ಅವರ ಹೆಸರಿಟ್ಟರೆ, ಅವರ ಕೀರ್ತಿ ಏನೂ ಹೆಚ್ಚುವುದಿಲ್ಲ. ಟಾಗೋರರ ಬಗ್ಗೆ ಭಾರತಕ್ಕೇ ಗೊತ್ತಲ್ಲ ಎನ್ನುತ್ತಾರೆ ಹಲವರು.
ಕಾರವಾರದ ಬೀಚ್ಗೆ ಟಾಗೋರ್ ಹೆಸರಿಡುವ ಬದಲು, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸ್ಥಳೀಯರ ಇಲ್ಲ ಪ್ರಾತಃ ಸ್ಮರಣೀಯರಾದ ಕನ್ನಡಿಗರ ಹೆಸರನ್ನೇ ಈ ಕಡಲ ತೀರಕ್ಕೆ ಇಡುವುದು ಒಳಿತು. ಯಶವಂತ ಚಿತ್ತಾಲ, ಶಿವರಾಮ ಕಾರಂತ, ಸೇಡಿಯಾಪು, ವ್ಯಾಸರಾಯ ಬಲ್ಲಾಳ, ಡಾ. ರಾಜಾರಾಮಣ್ಣ, ರಾಜಾ ಮಯೂರ ವರ್ಮ, ಅಮೋಘವರ್ಷ ನೃಪತುಂಗ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟರ ಹೆಸರೇಕೆ ಇಡಬಾರದು ಎಂದು ನಮ್ಮ ಓದುಗರೊಬ್ಬರು ಪ್ರಶ್ನಿಸಿದ್ದಾರೆ.
ಈಗ ಇಲ್ಲಿ ಮೂಲಭೂತವಾಗಿರುವುದು ಎರಡು ಪ್ರಶ್ನೆ?
- ಕಾರವಾರದ ಕಡಲ ತೀರಕ್ಕೆ ರವೀಂದ್ರನಾಥ ಟಾಗೋರ ಹೆಸರಿಡಬೇಕೆ?
- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕು?
ವಾರ್ತಾ
ಸಂಚಯ
ನಾಮಕರಣ
ನವೀಕರಣ
:
ನಮ್ಮೂರ
ದಾರಿಗಿಡಿ
ದಿಗ್ಗಜರ
ಹೆಸರ
ರಂಗವಲ್ಲಿ
ಮುಖಪುಟ / ಲೋಕೋಭಿನ್ನರುಚಿ