ಶಿರಸಿ : ತನ್ನ ಒಡೆಯನ ರಕ್ಷಿಸಲು ಚಿರತೆಯನ್ನೇ ಕೊಂದ ನಾಯಿ
ಶಿರಸಿ : ನಾಯಿ ನಿಯತ್ತಿನ ಪ್ರಾಣಿ. ತನ್ನ ಒಡೆಯನಿಗೆ ನಿಷ್ಠೆಯಿಂದಿರುವ ನಂಬಿಕೆಯ ಗೆಳೆಯ. ಈ ಮಾತನ್ನು ಇಲ್ಲಿನ ನಾಯಿಯಾಂದು ಮತ್ತೊಮ್ಮೆ ಸಾಬೀತು ಪಡಿಸಿದೆ. ತನ್ನ ಒಡೆಯ ಹಾಗೂ ಆತನ ಪುತ್ರನನ್ನು ಕಾಪಾಡಲು ಕಪ್ಪು ಚಿರತೆಯಾಂದಿಗೆ ಹೋರಾಡಿದ ನಾಯಿ, ಚಿರತೆಯನ್ನೇ ಕೊಲ್ಲುವಲ್ಲಿ ಹಾಗೂ ತನ್ನ ಒಡೆಯನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ.
ಯಲ್ಲಾಪುರ ತಾಲೂಕಿನ ಹೆಮ್ಮಡಿ ಗ್ರಾಮದ ಬಳಿಯ ಚಳ್ಳೇಹೊಂಡ ಅರಣ್ಯದಲ್ಲಿ ಈ ಸೋಜಿಗದ ಘಟನೆ ಬುಧವಾರ ನಡೆದಿದೆ. ಚಿರತೆ ಈ ಇಬ್ಬರ ಮೇಲೆ ದಾಳಿ ಮಾಡಿದಾಗ, ಜತೆಯಲ್ಲೇ ಇದ್ದ ಸಾಕು ನಾಯಿ ರಕ್ಷಣೆಗೆ ಬಂತು. ಪ್ರಾಣವನ್ನೂ ಕಾಪಾಡಿತು. ಚಿರತೆಯ ದಾಳಿಯಿಂದ ಗಾಯಗೊಂಡಿರುವ ಗಣಪತಿ ನಾಯಕ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಣಪತಿ ನಡೆದ ಘಟನೆ ಹೀಗೆ ವಿವರಿಸುತ್ತಾರೆ : ‘ನಾನು ಹಾಗೂ ನನ್ನ ಮಗ ಮಧುಕೇಶ್ವರ ನಾಯಕ್ ನಮ್ಮ ನೆಚ್ಚಿನ ನಾಯಿ ಪಿಂಟೋ ಜತೆ ಒಣಗಿದ ಎಲೆ ಸಂಗ್ರಹಿಸಲು ಕಾಡಿಗೆ ಹೋಗಿದ್ದೆವು. ಆಗ ಕರಿಯ ಬಣ್ಣದ ಚಿರತೆ ನಮ್ಮ ಮೇಲೆ ದಾಳಿ ಮಾಡಿತು. ಆಗ ನೆರವಿಗೆ ಬಂದ ಪಿಂಟೋ, ನನ್ನ ಕೈ ಹಿಡಿದಿದ್ದ ಚಿರತೆಯ ಮೇಲೆ ದಾಳಿ ಮಾಡಿತು. ಹಲವು ಬಾರಿ ಚಿರತೆಯನ್ನು ಕಚ್ಚಿತು. ನಾವು ಗಾಯಗೊಂಡಿದ್ದ ಚಿರತೆಯನ್ನು ಮನೆಗೆ ಹೊತ್ತು ತಂದು ಅರಣ್ಯ ಅಧಿಕಾರಿಗಳಿಗೆ ತಿಳಿಸಿದೆವು. ಈ ಮಧ್ಯೆ ತೀವ್ರವಾಗಿ ಗಾಯಗೊಂಡಿದ್ದ ಚಿರತೆ ನಮ್ಮ ಮನೆಯ ಮುಂಭಾಗಕ್ಕೆ ಬಂದಾಗ ಪ್ರಾಣ ಬಿಟ್ಟಿತು’. ಈ ವಿಷಯವನ್ನು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳು ಈ ಸಂಬಂಧ ಮಧುಕೇಶ್ವರ ನಾಯಕ್ ಅವರನ್ನು ಬಂಧಿಸಿದ್ದಾರೆ. ನಾಯಕ್ ಅವರ ಮನೆಯ ಆವರಣದಲ್ಲಿ ಚಿರತೆ ಸತ್ತು ಬಿದ್ದಿತ್ತು. ಅವರು ಚಿರತೆಯನ್ನು ಕಾಡಿನಿಂದ ಮನೆಗೆ ತೆಗೆದುಕೊಂಡು ಬರಬಾರದಾಗಿತ್ತು. ಈ ಹಿನ್ನೆಲೆಯಲ್ಲಿ ಮಧುಕೇಶ್ವರ್ ನಾಯಕ್ರನ್ನು ಬಂಧಿಸಲಾಗಿದೆ. ಆದರೆ, ಚಿರತೆಯ ಮೇಲೆ ಯಾವುದೇ ಗುಂಡಿನ ಗಾಯದ ಗುರುತಿಲ್ಲ. ಈ ಸಂಬಂಧ ತನಿಖೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರೇಂಜ್ ಫಾರೆಸ್ಟ್ ಆಫೀಸರ್ ಮೋಹನ್ ಕನಗಿಲ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.