ಕೃಷ್ಣಲೀಲೆಯ ಕಂಡಿರಾ ! ಗಿರಿಜನ ಹಾಡಿಯಲ್ಲಿ ಸಂಪುಟ ಸಭೆ
ಮೈಸೂರು : ಬಂಡಿಪುರ ಮತ್ತು ನಾಗರಹೊಳೆ ಅರಣ್ಯಪ್ರದೇಶದ 154 ಗಿರಿಜನ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಮತ್ತು ಗಿರಿಜನರು ವಾಸಿಸುವ ಪ್ರದೇಶದಲ್ಲಿ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಅವರು ಎಚ್.ಡಿ. ಕೋಟೆ ತಾಲ್ಲೂಕಿನ ಗಿರಿಜನ ಹಾಡಿಯಲ್ಲಿ ಬುಧವಾರ ನಡೆದ ಮಿನಿ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮತನಾಡುತ್ತಿದ್ದರು. ಗಿರಿಜನ ಹಾಡಿಯಲ್ಲಿ ಸಾರಾಯಿ ಅಂಗಡಿಗಳ ಹಾವಳಿ ಹೆಚ್ಚಾಗಿದೆ ಎಂಬ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ವರ್ಷವೇ ಸಾರಾಯಿ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದರು.
154 ಗಿರಿಜನ ಕುಟುಂಬಗಳಿಗೆ ಹೊಸಹಳ್ಳಿ ಬಳಿಯ ಆಲಂಗಟ್ಟಿ ಹಾಡಿಯಲ್ಲಿ ಜಾಗ ಒದಗಿಸಿ, ರಾಜೀವಗಾಂಧಿ ವಸತಿ ಕಾರ್ಯಕ್ರಮದ ಅಡಿಯಲ್ಲಿ 2,700 ಮನೆಗಳನ್ನು ನಿರ್ಮಿಸಲಾಗುವುದು. ಗಂಗಾ ಕಲ್ಯಾಣ ಯೋಜನೆಯಡಿ 53 ಕೊಳವೆ ಬಾವಿಗಳಿಗೆ ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಆಶ್ರಮ ಶಾಲೆಗಳನ್ನು ನಿರ್ಮಿಸಲಾಗುವುದು ಎಂದ ಕೃಷ್ಣ , ಮಿನಿ ಸಚಿವ ಸಂಪುಟ ಕಾರ್ಯಕ್ರಮವನ್ನು ಚಾಮರಾಜ ನಗರ, ದಕ್ಷಿಣ ಕನ್ನಡ, ಕೊಡಗು ಮತ್ತು ಚಿಕ್ಕ ಮಗಳೂರು ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ಮಿನಿ ಸಚಿವ ಸಂಪುಟ ಸಭೆಯಲ್ಲಿ ಅರಣ್ಯ ಸಚಿವ ಎಚ್. ಕೆ. ರಂಗನಾಥ್, ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ ಎಚ್. ಸಿ. ಶ್ರೀಕಂಠಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್. ವಿಶ್ವನಾಥ್, ಹಣಕಾಸು ಖಾತೆ ರಾಜ್ಯ ಸಚಿವ ಎಂ. ಶಿವಣ್ಣ ಭಾಗವಹಿಸಿದ್ದರು. ರಾಜ್ಯದ ಇತಿಹಾಸದಲ್ಲಿಯೇ ಗಿರಿಜನರ ಸಮಸ್ಯೆಗಳ ಬಗೆಗೆ ಗಿರಿಜನ ಹಾಡಿಯಲ್ಲಿಯೇ ಸಚಿವ ಸಂಪುಟ ಸಭೆ ನಡೆಸಿರುವುದು ಇದೇ ಮೊದಲು.
(ಇನ್ಫೋ ವಾರ್ತೆ)