ಟಾಸ್ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್, ಲಂಚ್ ಸ್ಕೋರ್ 140 ಕ್ಕೆ 2
ಚೆನ್ನೈ: ಭಾನುವಾರ ಇಲ್ಲಿನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ತಮ್ಮದಾಗಿಸಿಕೊಳ್ಳಲು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳೆರಡೂ ಹಣಾಹಣಿ ಹೋರಾಟ ನಡೆಸಿವೆ.
ಸತತ 16 ಟೆಸ್ಟ್ ಗೆಲುವುಗಳ ನಂತರ ಭಾರತ ವಿರುದ್ಧ ಕೋಲ್ಕತ್ತಾ ಟೆಸ್ಟ್ನಲ್ಲಿ ಸೋಲುಂಡ ಆಸ್ಟ್ರೇಲಿಯಾ ಭಾರತ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಲ್ಲಿದ್ದರೆ, ಸತತ 16 ಟೆಸ್ಟ್ ಗೆದ್ದಿದ್ದ ಬಲಿಷ್ಠ ತಂಡವನ್ನು 171ರನ್ಗಳಿಂದ ಮಣಿಸಿ, ಉತ್ಸಾಹದಿಂದ ಬೀಗುತ್ತಿರುವ ಭಾರತ ತಂಡ ಈ ಟೆಸ್ಟ್ ಅನ್ನೂ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಮಹದಾಸೆ ಹೊಂದಿದೆ.
ಭಾನುವಾರ ಬೆಳಗ್ಗೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ದಿನ ಬ್ಯಾಟಿಂಗ್ಗೆ ಸಹಕಾರಿ ಆಗಿರುವ ಪಿಚ್ನಲ್ಲಿ ಸಾಕಷ್ಟು ರನ್ ಪೇರಿಸಿ ಭಾರತದ ಮೇಲೆ ಒತ್ತಡ ಹೇರುವ ಅವರ ತಂತ್ರ ಬಹುತೇಕ ಫಲಿಸಿದಂತೆಯೇ ಆಗಿದೆ. ಮೊದಲ ದಿನವಾದ ಭಾನುವಾರ ಲಂಚ್ ವಿರಾಮಕ್ಕೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 140ರನ್ ಗಳಿಸಿತ್ತು. 59ರನ್ ಗಳಿಸಿರುವ ಹೆಡೆನ್ ಹಾಗೂ 25ರನ್ ಮಾಡಿರುವ ಮಾರ್ಕ್ ವಾ ಆಟವಾಡುತ್ತಿದ್ದಾರೆ.
ಭಾರತದ ವೇಗದ ಬೌಲರ್ ಜಡ್. ಖಾನ್ ಆಸ್ಟ್ರೇಲಿಯಾಕ್ಕೆ ಆರಂಭದಲ್ಲೇ ಆಘಾತ ನೀಡಿದರು. ಆಸ್ಟ್ರೇಲಿಯಾದ ಆರಂಭ ಆಟಗಾರ ಸ್ಲೇಟರ್ ಪಂದ್ಯದ ಮೊದಲ ಓವರ್ನಲ್ಲೇ ಜಾಹೀರ್ ಖಾನ್ ಬೌಲಿಂಗ್ನಲ್ಲಿ ಲಕ್ಷ್ಮಣ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಆನಂತರ ಡ್ರಿಂಕ್ಸ್ ವಿರಾಮಕ್ಕೆ ಸ್ವಲ್ಪ ಮೊದಲು ಜಸ್ಟಿನ್ ಲಾಂಗರ್ (35) ಹರ್ಭಜನ್ ಸಿಂಗ್ ಬೌಲಿಂಗ್ನಲ್ಲಿ ರಾಹುಲ್ ಡ್ರಾವಿಡ್ಗೆ ಕ್ಯಾಚಿತ್ತು ಪೆವಿಲಿಯನ್ಗೆ ಮರಳಿದರು.
ಭಾರತಕ್ಕೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅವಕಾಶ ವಿತ್ತಾದರೂ ಎರಡು ಉತ್ತಮ ಅವಕಾಶಗಳನ್ನು ವ್ಯರ್ಥ ಮಾಡಿಕೊಂಡಿತು. ನಯನ್ ಮೊಂಗಿಯಾ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಸಮೀರ್ ದಿಘ ಮ್ಯಾಥ್ಯು ಹೆಡನ್ ಅವರನ್ನು ರನ್ ಔಟ್ ಮಾಡುವ ಉತ್ತಮ ಅವಕಾಶವನ್ನು ಕೈಚೆಲ್ಲಿದ್ದಲ್ಲದೆ, ಮಾರ್ಕ್ ವಾ ಅವರನ್ನು ಸ್ಟಂಪ್ ಮಾಡುವ ಅತ್ಯುತ್ತಮ ಅವಕಾಶವನ್ನು ಹಾಳು ಮಾಡಿದರು.
ಭಾರತ ಮೂರನೇ ಟೆಸ್ಟ್ಗೆ ಮೂರು ಬದಲಾವಣೆಗಳನ್ನು ಮಾಡಿತು. ಮೊಂಗಿಯಾ ಬದಲು ದಿಘ ಸ್ಥಾನ ಪಡೆದರೆ, ವೆಂಕಟೇಶ್ ಪ್ರಸಾದ್ ಹಾಗೂ ವೆಂಕಟಪತಿ ರಾಜು ಬದಲು ಬಹುತಲೆ ಹಾಗೂ ನೀಲೇಶ್ ಕುಲಕರ್ಣಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಮೀರ್ ದಿಘ ಅವರಂತೂ ಕೆಟ್ಟ ಕೀಪಿಂಗ್ನಿಂದ 9 ರನ್ಗಳನ್ನು ಬೈಸ್ ಮೂಲಕವೇ ನೀಡಿದ್ದಾರೆ.