ಬೆಂಗಳೂರಲ್ಲಿ ನೂರು ದಾಟಿದ ಬೇಸಗೆ ಮಾರಿ ಪ್ರಕರಣ
ಬೆಂಗಳೂರು : ಕರುಳುಬೇನೆಗೆ ತುತ್ತಾಗಿರುವವರ ಸಂಖ್ಯೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ ನೂರಕ್ಕೂ ಹೆಚ್ಚು ಕರುಳುಬೇನೆ ಪ್ರಕರಣಗಳು ದಾಖಲಾಗಿದ್ದು , ಪಳನಿ (4) ಎನ್ನುವ ಮಗು ಬೇನೆಗೆ ಬಲಿಯಾಗಿದೆ.
ಅಲಸೂರು, ಇಂದಿರಾನಗರ, ಲಕ್ಷ್ಮೀಪುರ, ಬಯ್ಯಪ್ಪನಹಳ್ಳಿ, ಸರಸ್ವತಿಪುರ, ರಾಮಮೂರ್ತಿನಗರ, ತಿಪ್ಪಸಂದ್ರ, ಜೋಗುಪಾಳ್ಯ, ಬಿನ್ನಮಂಗಲ ಮತ್ತಿತರ ಪ್ರದೇಶಗಳಲ್ಲಿ ಕರುಳುಬೇನೆ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಬೆಂಗಳೂರು ಜಲಮಂಡಳಿ ನೀರು ಪೂರೈಕೆಯ ಕೊಳವೆಯಲ್ಲಿ ಕಲುಷಿತ ನೀರು ಬೆರೆತಿದ್ದು , ಆ ನೀರು ಕುಡಿದದ್ದೇ ಬೇನೆಗೆ ಕಾರಣ ಎಂದು ಶಂಕಿಸಲಾಗಿದೆ.
ಉಲ್ಬಣಗೊಂಡ ವಾಂತಿ ಭೇದಿ ಸಮಸ್ಯೆಯಿಂದಾಗಿ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಅನೇಕರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಸೋಮವಾರದ ಹೊತ್ತಿಗೆ 76 ರೋಗಿಗಳು ಚಿಕಿತ್ಸೆ ಪಡೆದಿದ್ದರೆ, ಮಂಗಳವಾರ ಕೂಡ 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯಕ್ಕೆ ಪುರುಷರ ವಾರ್ಡಿನಲ್ಲಿ 30 ಮಂದಿ ಹಾಗೂ ಮಹಿಳೆಯರ ವಾರ್ಡಿನಲ್ಲಿ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಸೊಲೇಷನ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ನಡುವೆ ಕರುಳುಬೇನೆ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹೆಚ್ಚುವರಿ ಕ್ಲೋರಿನ್ ಬೆರೆಸಲು ಜಲಮಂಡಳಿ ನಿರ್ಧರಿಸಿದೆ. ಜಲಮಂಡಳಿಯ ಕಾರ್ಯ ನಿರ್ವಾಹಕ ಇಂಜಿನಿಯರ್ ನೇತೃತ್ವದ ತಂಡ ರೋಗಪೀಡಿತ ಪ್ರದೇಶಗಳಲ್ಲಿ ತಪಾಸಣೆ ನಡೆಸಿ, ಕೆಲವು ಪ್ರದೇಶಗಳ ನೀರನ್ನು ಪರೀಕ್ಷೆಗೊಳಪಡಿಸಿದೆ. ಆದರೆ, ಸಂಗ್ರಹಿಸಿದ ನೀರಿನಲ್ಲಿ ಕಲುಷಿತ ಅಂಶಗಳು ಕಂಡುಬಂದಿಲ್ಲ ಎಂದು ಜಲ ಮಂಡಳಿ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...