ರಾಜ್ಯ ಸರಕಾರದಿಂದ ಕೇಂದ್ರದ 46 ಕೋಟಿ ರೂ ಬಳಕೆಯಾಗಿಲ್ಲ
ನವದೆಹಲಿ : ಕಳೆದ ಡಿಸೆಂಬರ್ ತಿಂಗಳ ವರೆಗೆ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ 46.80 ಕೋಟಿ ರೂಪಾಯಿಯನ್ನು ರಾಜ್ಯ ಸರಕಾರ ಖರ್ಚು ಮಾಡದೇ ಇರುವುದರಿಂದ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಖಾತೆ ಸಚಿವ ಬಂಡಾರು ದತ್ತಾತ್ರೇಯ ಲೋಕಸಭೆಯಲ್ಲಿ ಗುರುವಾರ ತಿಳಿಸಿದ್ದಾರೆ.
ಈ ಯೋಜನೆಯ ಬಗೆಗಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೇಂದ್ರಕ್ಕೆ ವಿವರಿಸಿದಲ್ಲಿ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುವುದು ಸಾಧ್ಯ. ಈ ಕುರಿತು ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ಕಾಂಗ್ರೆಸ್ ಸದಸ್ಯ ಜಿ.ಎಸ್. ಬಸವರಾಜು ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. ಕೇಂದ್ರದಿಂದ ಈ ಯೋಜನೆಗೆ ಮೂರನೇ ಎರಡರಷ್ಟು ಹಣವನ್ನು ನೀಡಿದರೆ ಉಳಿದ ಮೂರನೇ ಒಂದರಷ್ಟು ಹಣವನ್ನು ರಾಜ್ಯ ಸರಕಾರವೇ ಭರಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಆಮದನ ಹಳ್ಳಿಯಲ್ಲಿ ಮೀನುಗಾರಿಕಾ ಬಂದರು : ಸೀಬರ್ಡ್ ನೌಕಾನೆಲೆಯಿಂದ ನಿರ್ವಸಿತರಾದವರಿಗೆ ಉದ್ಯೋಗ ಒದಗಿಸುವ ದೃಷ್ಟಿಯಿಂದ ಉತ್ತರ ಕನ್ನಡದ ಅಮದನ ಹಳ್ಳಿಯಲ್ಲಿ 10.32 ಕೋಟಿ ರೂಪಾಯಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಹೇಳಿದರು.
(ಇನ್ಫೋ ವಾರ್ತೆ)












Click it and Unblock the Notifications