ಆ್ಯಸಿಡ್ ಪ್ರಕರಣ : ಹರದನಹಳ್ಳಿಯಲ್ಲಿ ತನಿಖೆ ವಹಿಸಿಕೊಂಡ ಸಿಓಡಿ
ಹಾಸನ : ಯಾವುದೇ ತನಿಖೆ ಬೇಡವೆಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದರೂ, ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಶುಕ್ರವಾರ ಸಿಓಡಿ ತನಿಖಾ ಕಾರ್ಯ ವಹಿಸಿಕೊಂಡಿದೆ.
ದೇವೇಗೌಡರ ತಮ್ಮ ಬಸವೇಗೌಡರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅವರ ಮತ್ತೊಬ್ಬ ಪುತ್ರ ಜ್ಞಾನೇಂದ್ರಗೌಡರ ಹುಡುಕಾಟದಲ್ಲಿದ್ದಾರೆ. ಬಸವೇಗೌಡರ ವಿಚಾರಣೆಯಿಂದ ಏನಾದರೂ ವಿಷಯಗಳು ಹೊರಬಂದವೇ ಎಂಬ ಪ್ರಶ್ನೆಗೆ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಎಂ.ಎ.ಸಲೀಂ ಉತ್ತರಿಸಲು ನಿರಾಕರಿಸಿದರು.
ತನ್ನ ಸಹೋದರ ಲೋಕೇಶ, ಚೆನ್ನಮ್ಮ ದೇವೇಗೌಡ ಹಾಗೂ ಭವಾನಿ ಅವರ ಮೇಲೆ ಆಸಿಡ್ ಎರಚಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಜ್ಞಾನೇಂದ್ರಗೌಡರೂ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಾಪತ್ತೆಯಾಗಿರುವ ಜ್ಞಾನೇಂದ್ರಗೌಡರ ತಲಾಶಿನಲ್ಲಿದ್ದಾರೆ.
ಹರದನಹಳ್ಳಿ ಶಾಂತ : ಗುರುವಾರ ಬಂದ್ನಿಂದ ಪ್ರಕ್ಷುಬ್ಧವಾಗಿದ್ದ ಹರದನಹಳ್ಳಿಯಲ್ಲಿ ಶುಕ್ರವಾರ ಪರಿಸ್ಥಿತಿ ತಿಳಿಗೊಂಡಿತ್ತು. ಕಣ್ಣಾಡಿಸಿದೆಲ್ಲೆಡೆ ಪೊಲೀಸರು. ಹಳ್ಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶನಿವಾರದಿಂದ ಬಸ್ ಸಂಚಾರವನ್ನು ಪ್ರಾರಂಭಿಸಲಿದೆ.
ಚೆನ್ನಮ್ಮನವರ ಪ್ಲಾಸ್ಟಿಕ್ ಸರ್ಜರಿ ಸಕ್ಸಸ್
ಬೆಂಗಳೂರು : ಚೆನ್ನಮ್ಮನವರ ದೇಹದ ಸುಟ್ಟ ಭಾಗಗಳಿಗೆ ಮಲ್ಯ ಆಸ್ಪತ್ರೆಯ ಮೂವರು ವೈದ್ಯರ ತಂಡ ಶುಕ್ರವಾರ ಚರ್ಮ ಕಸಿ ಮಾಡಿದ್ದಾರೆ.
ತಲೆ, ಎದೆ ಹಾಗೂ ದೇಹದ ಬಲಭಾಗದಲ್ಲಿ ಸುಟ್ಟು ಕರಕಲಾಗಿದ್ದ ಚರ್ಮವನ್ನು ತೆಗೆದು, ಬಲಗಾಲು ಹಾಗೂ ಬಲತೊಡೆಯ ಚರ್ಮದಿಂದ ಕಸಿ ಮಾಡಿದ್ದಾರೆ. ಡಾ.ಉದಯಶಂಕರ್, ಡಾ.ಆನಂದ್ ಹಾಗೂ ಮುಂಬಯಿಯಿಂದ ಬಂದಿದ್ದ ಡಾ.ವಿ.ಎ.ರಾಮ್ ಈ ಚಿಕಿತ್ಸೆ ನಡೆಸಿದ್ದಾರೆ. ಚೆನ್ನಮ್ಮನವರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿದ್ದು, ಅವರ ದೇಹಸ್ಥಿತಿ ಉತ್ತಮವಾಗಿದೆ ಎಂದು ಮಲ್ಯ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...