‘ಮುಖವಾಡಗಳಿಲ್ಲದ ಮನುಷ್ಯ ಸುಂಕದಕಟ್ಟೆ ನಿರಂಜನ ಸ್ವಾಮೀಜಿ’
ಮಂಗಳೂರು : ಮನುಷ್ಯ ತನ್ನ ವಿವಿಧ ಮುಖವಾಡಗಳನ್ನು ಕಳಚುತ್ತಾ ಹೋದಂತೆ ಸರಳ ವ್ಯಕ್ತಿತ್ವವನ್ನು ಪಡೆಯುತ್ತಾನೆ ಎಂಬುದಕ್ಕೆ ನಿರಂಜನ ಸ್ವಾಮಿಗಳು ಉತ್ತಮ ಉದಾಹರಣೆ ಎಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಅವರು ಮಂಗಳವಾರ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿಯವರ ಸಪ್ತತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸ್ವಾಮೀಜಿಗಳನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸರಳ ವ್ಯಕ್ತಿಗೆ ಮಾತ್ರ ಧರ್ಮವನ್ನು ಪರಿಪಾಲಿಸುವುದು ಸಾಧ್ಯವಾಗುತ್ತದೆ ಎಂದು ಹೆಗ್ಗಡೆಯವರು ನಿರಂಜನ ಸ್ವಾಮಿಗಳ ಧಾರ್ಮಿಕತೆಯನ್ನು ಶ್ಲಾಘಿಸಿದರು.
ಸಪ್ತತಿ ಉತ್ಸವವನ್ನು ಎಪ್ಪತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಮತ್ತು ಧಾರ್ಮಿಕ ಪ್ರವಚನಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ನಿರಂಜನ ಸ್ವಾಮೀಜಿಯವರ ಕುರಿತು, ದೇಜಪ್ಪ ಅವರು ಬರೆದ ಕರ್ಮಯೋಗಿ ಪುಸ್ತಕವನ್ನು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಿದರು. ಸಪ್ತತಿ ಉತ್ಸವದ ಸ್ಮರಣ ಸಂಚಿಕೆಯನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ನ ಡಾ. ಮೋಹನ್ ಆಳ್ವ ಬಿಡುಗಡೆ ಮಾಡಿದರು. ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ನೂತನ ಸಭಾಂಗಣವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
(ಇನ್ಫೋ ವಾರ್ತೆ)