ಪ್ರೇಮಿಗಳ ದಿನಾಚರಣೆ ಕೈ ಬಿಡಿ, ಸಂತ್ರಸ್ತರಿಗೆ ದೇಣಿಗೆ ನೀಡಿ
ಮುಂಬಯಿ : ಗುಜರಾತ್ ಭೂಕಂಪ ದುರಂತದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸಹೃದಯರು ಪ್ರೇಮಿಗಳ ದಿನ (ಫೆ.14) ಆಚರಣೆಯನ್ನು ಕೈ ಬಿಟ್ಟು , ಆ ಹಣವನ್ನು ಸಂತ್ರಸ್ತರ ನಿಧಿಗೆ ದೇಣಿಗೆ ನೀಡುವಂತೆ ಭಾರತೀಯ ರೆಡ್ ಕ್ರೆಸೆಂಟ್ ಸೊಸೈಟಿ ಮನವಿ ಮಾಡಿದೆ.
ಮುಂಬಯಿಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿರುವ ಸೊಸೈಟಿ- ಭೂಕಂಪಕ್ಕೀಡಾದ ಕೆಲವು ಪ್ರದೇಶಗಳನ್ನು ದತ್ತು ಪಡೆಯುವುದಾಗಿ ಹಾಗೂ ಪುನನರ್ವಸತಿ ಕುರಿತಂತೆ ಸವಿವರವಾದ ಯೋಜನೆಯನ್ನು ತಯಾರಿಸಿ ದತ್ತು ಪಡೆದ ಪ್ರದೇಶಗಳಲ್ಲಿ ಜಾರಿಗೊಳಿಸುವುದಾಗಿ ತಿಳಿಸಿದೆ. ಇದಕ್ಕೆ ಮುನ್ನ ವಿವಿಧ ವೈದ್ಯಕೀಯ ವಿಭಾಗಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ತಜ್ಞರನ್ನೊಳಗೊಂಡ ಸೊಸೈಟಿಯ ಸಮಿತಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಡುವುದು.
ಗುಜರಾತ್ ಭೂಕಂಪದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಮುಂಬಯಿಯ ಬಾಂದ್ರಾ, ಬೊರಿವಲಿಗಳಲ್ಲಿ ವಿಶೇಷ ಕೇಂದ್ರಗಳನ್ನು ಸೊಸೈಟಿ ತೆರೆದಿದೆ. ಅಖಿಲ ಭಾರತ ಮಿಲ್ಲಿ ಕೌನ್ಸಿಲ್, ಮುಂಬಯಿ ಅಮಾನ್ ಕಮಿಟಿ, ನಾಗರಿಕ ಹಿತಾಸಕ್ತಿ ಸಮಿತಿ, ಹಿಂದೂ ಮುಸ್ಲಿಂ ಏಕತಾ ವೇದಿಕೆ, ಅಭ್ಯಾಸ ನಿರತ ಭಾರತೀಯ ವೈದ್ಯರ ಒಕ್ಕೂಟ, ಬಾಜ್ಮಿ - ಸಿದ್ಧಿಕ್, ಏಕತಾ ವೆಲ್ಫೇರ್ ಅಸೋಸಿಯೇಷನ್, ಇಸ್ಲಾಮಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ಮಹಾರಾಷ್ಟ್ರ ವೆಲ್ಫೇರ್ ಅಂಡ್ ಎಜುಕೇಷನ್ ಸೊಸೈಟಿಗಳು ಪರಿಹಾರ ಕಾರ್ಯದಲ್ಲಿ ರೆಡ್ ಕ್ರೆಸೆಂಟ್ ಸೊಸೈಟಿಯಾಂದಿಗೆ ಕೈ ಜೋಡಿಸಿವೆ.
ವಾಷಿಂಗ್ಟನ್ ವರದಿ : ಭೂಕಂಪ ಪೀಡಿತ ಗುಜರಾತ್ಗೆ ದೀರ್ಘಕಾಲದ ನೆರವನ್ನು ನೀಡುವಂತೆ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜೆಸ್ಸಿ ಹೆಮ್ಸ್ ಸೇರಿದಂತೆ 12 ಯುಎಸ್ ಸೆನೆಟರ್ಗಳು ಒತ್ತಾಯಿಸಿದ್ದಾರೆ.
ಮಾನವೀಯತೆಯ ಆಧಾರದ ಮೇಲೆ ಗುಜರಾತ್ಗೆ ತಾಂತ್ರಿಕ ಬೆಂಬಲ ಹಾಗೂ ಹಣಕಾಸಿನ ದೀರ್ಘಕಾಲೀನ ನೆರವನ್ನು ಒದಗಿಸಬೇಕು. ಪುನರ್ವಸತಿ ಕಾರ್ಯಗಳಲ್ಲಿ ಅಮೆರಿಕ ಮುಖ್ಯಪಾತ್ರ ವಹಿಸಬೇಕು ಎಂದು ಸೆನೆಟರ್ಗಳ ಗುಂಪು ಹೇಳಿದೆ.