ಭೂಕಂಪ : ಪ್ರಧಾನಿಯಿಂದ ರೈಲು ದರ ಏರಿಸುವ ಸ್ಪಷ್ಟ ಸೂಚನೆ
ಲಖನೌ : ಭೂಕಂಪದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಬಿದ್ದರೆ ರೈಲ್ವೆ ಪ್ರಯಾಣ ಹಾಗೂ ಸರಕು ಸಾಗಣೆ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸುವುದು ಅನಿವಾರ್ಯವಾಗುತ್ತದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರಧಾನಿ ವಾಜಪೇಯಿ ನೀಡಿದ್ದಾರೆ.
ಮುಂಬರುವ ಬಜೆಟ್ನಲ್ಲಿ ಹೆಚ್ಚುವರಿ ತೆರಿಗೆ ತೆರಲು ಸಿದ್ಧರಾಗಿರಿ ಎಂದು ಹೇಳಿದ 24 ಗಂಟೆಗಳ ಒಳಗೇ ಪ್ರಧಾನಿ ರೈಲು ದರ ಏರಿಸುವ ಪ್ರಸ್ತಾಪ ಮಾಡಿದ್ದಾರೆ. ಇಲ್ಲಿ ವರ್ತುಲ ರೈಲ್ವೇ ವಿದ್ಯುದ್ದೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದ ಅವರು ಚಂಡಮಾರುತ, ಭೂಕಂಪ, ಕ್ಷಾಮ, ಪ್ರವಾಹವೇ ಮೊದಲಾದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತೀರಾ ಅನಿವಾರ್ಯವಾದಾಗ ರೈಲು ದರ ಏರಿಸಬೇಕಾಗುತ್ತದೆ ಎಂದೂ ಅಟಲ್ ಬಿಹಾರಿ ವಾಜಪೇಯಿ ತಿಳಿಸಿದರು.
ಸಚಿವ ಸಂಪುಟ ಸಭೆ: (ದೆಹಲಿ ವರದಿ) ಹಿಂದೆಂದೂ ಸಂಭವಿಸದಂತ ಭೀಕರ ಭೂಕಂಪದ ಬಗ್ಗೆ ಹಾಗೂ ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚಿಸಲು ಗುರುವಾರ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟದ ಸಭೆ ನಡೆಯಲಿದೆ. ಪ್ರಧಾನಿ ವಾಜಪೇಯಿ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಗುಜರಾತ್ನಲ್ಲಿ ಸಂಪೂರ್ಣ ನಾಶವಾಗಿರುವ ಪಟ್ಟಣಗಳಾದ ಭುಜ್, ಕಛ್, ಗಾಂಧಿಧಾಮ್ ಸೇರಿದಂತೆ ಇನ್ನಿತರ ಭೂಕಂಪ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಹಾಗೂ ಪರಿಹಾರ ಕಾಮಗಾರಿ, ಕೈಗೊಳ್ಳಬೇಕಾದ ಪುನರ್ವತಿ ಕಾರ್ಯಕ್ರಮಗಳ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು.
ಮುಂದಿನ ದಿನಗಳಲ್ಲಿ ಭೂಕಂಪದ ಹಾನಿಯನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಹ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಈಗ ಚೆನ್ನೈನಲ್ಲಿರುವ ಪ್ರಧಾನಿ ದೆಹಲಿಗೆ ವಾಪಸಾಗುತ್ತಿದ್ದಂತೆಯೇ ಸಭೆ ಆರಂಭವಾಗಲಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.