ಮೈಸೂರು ಒಡೆಯರ್ ನಿವಾಸದಿ ಬೆಳಗಿದ ವಿದ್ಯುತ್ ದೀಪಗಳು
ಮೈಸೂರು : ದಂಡಿನಲ್ಲಿ ಸೋದರ ಮಾವನೆ ಎಂಬಂತೆ ವಿದ್ಯುತ್ ಬಿಲ್ ಬಾಕಿ ಕಟ್ಟದ ಕಾರಣಕ್ಕಾಗಿ ಕಡಿತಗೊಳಿಸಲಾಗಿದ್ದ ಮೈಸೂರು ಅರಮನೆಯ ಒಂದು ಭಾಗದಲ್ಲಿರುವ ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಬಂಧುಗಳ ನಿವಾಸಗಳಲ್ಲಿ ಭಾನುವಾರ ಮತ್ತೆ ವಿದ್ಯುತ್ ದೀಪಗಳು ಪ್ರಕಾಶಿಸಿದವು.
ಸುಮಾರು 18 ಲಕ್ಷ ರುಪಾಯಿ ಬಾಕಿ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ವಿದ್ಯುತ್ ಸಂಪರ್ಕವನ್ನು ಕೆ.ಪಿ.ಟಿ.ಸಿ.ಎಲ್. ಕಡಿತ ಮಾಡಿತ್ತು. ಅರಮನೆ ವಿವಾದವು ನ್ಯಾಯಾಲಯದಲ್ಲಿ ಇರುವ ಕಾರಣ ತಾವು ವಿದ್ಯುತ್ ಬಾಕಿ ಕಟ್ಟುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ಒಡೆಯರ್ ಅವರ ವಾದವಾಗಿತ್ತು.
ಈ ಮಧ್ಯೆ ಅರಮನೆಯ ರಾಜ ವಂಶಸ್ಥರ ಮನೆಗಳಿಗೆ ಸೋಮವಾರದೊಳಗೆ ವಿದ್ಯುತ್ ಪೂರೈಸದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಅರಸು ಮಹಾಸಭಾ ಎಚ್ಚರಿಕೆಯನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷರಾದ ವಿ.ಪಿ. ಬಾಳಿಗಾರ್ ಅವರು ಒಡೆಯರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ತರುವಾಯ ಕಡಿತಗೊಳಿಸಲಾಗಿದ್ದ ವಿದ್ಯುತ್ ಅನ್ನು ಮತ್ತೆ ಪೂರೈಸುವ ನಿರ್ಧಾರ ಕೈಗೊಂಡರು. ಈ ವಿಷಯವನ್ನು ತಿಳಿಸಿರುವ ಅರಸು ಮಹಾ ಸಭಾದ ಅಧ್ಯಕ್ಷ ನಂದೀಶ್ ಅವರು, ತಮ್ಮ ಕೋರಿಕೆ ಈಡೇರಿದ ಹಿನ್ನೆಲೆಯಲ್ಲಿ ಉದ್ದೇಶಿತ ಚಳವಳಿಯನ್ನು ಕೈಬಿಡಲಾಗಿದೆ ಎಂದೂ ತಿಳಿಸಿದ್ದಾರೆ.