ಪ್ರಧಾನಿ ವಾಜಪೇಯಿ ಡೈರಿ : ಬೆಂಗಳೂರು, 19. 01.2001
ಬೆಂಗಳೂರು : ಶುಕ್ರವಾರ ಮಧ್ಯಾಹ್ನದ ಬಿಸಿಲು ಕಾಣಿಸಿಕೊಳ್ಳುವ ಹೊತ್ತಿಗೆ ಸಿಲಿಕಾನ್ ವ್ಯಾಲಿಗೆ ಬಂದಿಳಿದ ಪ್ರಧಾನಿ, ದಿನವಿಡೀ ಬಿಡುವಿರದ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದರು.
ಕುಂಬಳಗೋಡಿನಲ್ಲಿ ಅನಿವಾಸಿ ಭಾರತೀಯ ಮಕ್ಕಳ ವಸತಿ ಶಾಲೆಯ ಉದ್ಘಾಟನೆ, ಸತ್ಯಸಾಯಿ ಹೈಟೆಕ್ ಆಸ್ಪತ್ರೆಗೆ ಹಸಿರು ನಿಶಾನೆ, ಇನ್ಫೋಸಿಸ್ ಭೇಟಿ ಹಾಗೂ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗೆ ಸಾಂಕೇತಿಕ ಚಾಲನೆ- ಇವಿಷ್ಟೂ ಪ್ರಧಾನಿಯ ಶುಕ್ರವಾರ ಮುಗಿದ ಪ್ರೋಂಗ್ರಾಂಗಳು. ಆ ಕುರಿತು ಕೆಲವು ತುಣುಕುಗಳನ್ನು ಹೆಕ್ಕುವುದಾದರೆ-
- ಪ್ರಧಾನಿ ಉದ್ಘಾಟಿಸಿದ ಸತ್ಯಸಾಯಿ ಹೈಟೆಕ್ ಆಸ್ಪತ್ರೆ ಹಲವು ಕಾರಣಗಳಿಂದ ವಿಶಿಷ್ಟವಾದುದು. ಬಡವರಿಗೆ ಈ ಧರ್ಮಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ , ಆದರೆ ಹೈಟೆಕ್ ಉಪಚಾರ. ಇದು ವಿಶ್ವದಲ್ಲಿಯೇ ಬಿಲ್ಲಿಂಗ್ ವಿಭಾಗ ಇಲ್ಲದ ಎರಡನೇ ಹೈಟೆಕ್ ಆಸ್ಪತ್ರೆ ಅನ್ನುವುದೊಂದು ಅಂದಾಜು. ಅರಮನೆಯನ್ನು ಹೋಲುವಂತಿರುವ ಆಸ್ಪತ್ರೆಯ ಕಟ್ಟಡವನ್ನು ಎಲ್ ಅಂಡ್ ಟಿ ಸಂಸ್ಥೆ ಕೇವಲ ಒಂದು ವರ್ಷದ ಅವಧಿಯಲ್ಲಿ ಮುಗಿಸಿರುವುದು ಮತ್ತೊಂದು ವಿಶೇಷ.
- ಎಲ್ಲರಿಗೂ ಆರೋಗ್ಯ ಅನ್ನುವ ಗುರಿ ಸಾಧಿಸಲು ಸತ್ಯಸಾಯಿಯಂಥಾ ಉದಾತ್ತ ಉದ್ದೇಶದ ಆಸ್ಪತ್ರೆಗಳು ಸಹಕಾರಿಯಾಗುತ್ತವೆ ಎಂದ ಪ್ರಧಾನಿ, ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವುದಕ್ಕೆ ವಿಷಾದಿಸಿದರು. ಪ್ರಸ್ತುತ ದೇಶದಲ್ಲಿ ಪ್ರತಿ ಸಾವಿರ ರೋಗಿಗಳಿಗೆ ಓರ್ವ ವೈದ್ಯನಿದ್ದಾನೆ. ಈ ಅಂತರ ಕಡಿಮೆಯಾಗಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮತ್ತಷ್ಟು ಯೋಜನೆ- ನೆರವು ಹಮ್ಮಿಕೊಳ್ಳುವುದು ಎಂದರು.
- ಕುಂಬಳಗೋಡಿನ ಅನಿವಾಸಿ ಭಾರತೀಯ ಮಕ್ಕಳ ವಸತಿ ಶಾಲೆ 25 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿತವಾಗಿದೆ. ಅನೇಕ ದೇಶಗಳ ಮಕ್ಕಳು ಇಲ್ಲಿದ್ದಾರೆ. ಈ ಶಾಲೆ ಉದ್ಘಾಟಿಸಿದ ಸಂದರ್ಭದಲ್ಲಿ ಪ್ರಧಾನಿ, ಬಾಲಗಂಗಾಧರ ನಾಥ ಸ್ವಾಮಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರು ಅನೇಕ ಯೋಜನೆಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಮುಖ್ಯವಾದವುಗಳು -
2. ಮಳೆಯಾಧಾರಿತ ಕೃಷಿ ಪದ್ಧತಿಗೆ ವಿದಾಯ ಹೇಳುವ ಉದ್ದೇಶದಿಂದ ಜಲ ಸಂವರ್ಧನೆ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿ ಮಳೆ ನೀರಿನ ಸಂಗ್ರಹ.
3. ಸರ್ವ ಋತು ರಸ್ತೆಗಳಾಗಿ ಗ್ರಾಮೀಣ ರಸ್ತೆಗಳ ಪರಿವರ್ತನೆ.
4. ಅಂತ್ಯೋದಯ ಅನ್ನ ಯೋಜನೆಯಡಿ ಕಡು ಬಡವರಿಗೆ 3 ರು.ಗೆ ಕಿಲೋ ಅಕ್ಕಿ ಹಾಗೂ 2 ರು.ಗೆ ಕಿಲೋ ಗೋಧಿ ವಿತರಣೆ. ಅಂತೆಯೇ ಅನ್ನಪೂರ್ಣ ಯೋಜನೆಯಡಿ ವೃದ್ಧರಿಗೆ (60 ವರ್ಷ ಮೇಲ್ಪಟ್ಟ ) ಉಚಿತವಾಗಿ ಮಾಸಿಕ 10 ಕೆಜಿ ಅಕ್ಕಿ ವಿತರಣೆ. ಈ ಯೋಜನೆಯನ್ನು ಪ್ರಧಾನಿ ತಮ್ಮ ಹುಟ್ಟು ಹಬ್ಬದಂದೇ ಪ್ರಕಟಿಸಿದ್ದರು.
- ಇನ್ಫೋಸಿಸ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ- ಬೆಂಗಳೂರಿಗೆ ಇನ್ಫೋಸಿಸ್ ತಾಜ್ಮಹಲ್ ಇದ್ದಂತೆ ಎಂದು ಬಣ್ಣಿಸಿದರು. ಐಟಿ ಹಳ್ಳಿಗಳಿಗೂ ಮುಟ್ಟುತ್ತಿದೆ ಎಂದು ಅವರು ಸಂತೋಷಿಸಿದರು.
- ಕೊನೆಯದಾಗಿ- ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ. ವಿಧಾನ ಸೌಧದಲ್ಲಿ ರಿಮೋಟ್ ಒತ್ತುವ ಮೂಲಕ ಸಾಂಕೇತಿಕ ಕಾರ್ಯಕ್ರಮ.