ಎತ್ತರ ಸ್ಥಳದಿಂದ ಬಿದ್ದು ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದ್ದೆ : ರಾಜ್
ಬೆಂಗಳೂರು : ಏಕೀ ಯಾತನೆ ಅಂತ ಎತ್ತರದ ಸ್ಥಳಕ್ಕೆ ಹೋಗಿ ಮೇಲಿನಿಂದ ಕೆಳಕ್ಕೆ ಬಿದ್ದು ಪ್ರಾಣ ಅನ್ನುವ ಶಕ್ತಿ ಕಳೆದು ಕೊಳ್ಳುವ ನಿರ್ಧಾರ ಮಾಡಿದ್ದೆ, ಆದರೆ, ಕೆಳಗೆ ಬಿದ್ದಾಗ ಪ್ರಾಣ ಹೋಗದೆ ಕೈ ಕಾಲು ಮುರಿದರೆ ಮತ್ತಷ್ಟು ಯಾತನೆ ಪಡಬೇಕಲ್ಲಾ ಅಂತ ಮನಸ್ಸು ಕಲ್ಲು ಮಾಡಿಕೊಂಡೆ - ಇದು ವೀರಪ್ಪನ್ ಒತ್ತೆಯಲ್ಲಿ 108 ದಿನ ಕಳೆದ ರಾಜ್ಕುಮಾರ್ ಅವರ ಮನದಂತರಾಳದ ಮಾತುಗಳು.
108 ದಿನದ ವನವಾಸದ ನಂತರ ನಾಡಿಗೆ ಬಂದು ವಿಶ್ರಾಂತಿ ಪಡೆದ ಬಳಿಕ, ತಾವು ಕಾಡಿನಲ್ಲಿದ್ದಾಗ ತಮ್ಮ ಹಾಗೂ ತಮ್ಮ ಕುಟುಂಬದವರ ನಡುವೆ ಏಕೈಕ ಕೊಂಡಿಯಾಗಿದ್ದ ಆಕಾಶವಾಣಿಗೆ ನೀಡಿರುವ ಪ್ರಪ್ರಥಮ ಸಂದರ್ಶನದಲ್ಲಿ ರಾಜ್ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಬಾನುಲಿಯ ಶ್ರೋತೃಗಳೊಂದಿಗೆ ತಮ್ಮ ಕಾಡಿನ ಅನುಭವ ಹಂಚಿಕೊಂಡಿದ್ದಾರೆ.
ತಮ್ಮ ಅಗಲಿಕೆಯ ನೋವು ಅನುಭವಿಸಿದ ಪತ್ನಿಯ ಕಂಡಾಗ ಆದ ಅನುಭವ, ಗಡ್ಡಧಾರಿಗಳಾಗಿ ಸೊರಗಿದ್ದ ಮಕ್ಕಳನ್ನು ಕಂಡಾಗ ಆದ ನೋವು, ಮಕ್ಕಳು ಮೊಮ್ಮಕ್ಕಳನ್ನು ಕಲೆತ ನಂತರ ಆದ ಆನಂದ, ಇದೆಲ್ಲಕ್ಕೂ ಮಿಗಿಲಾಗಿ ಕಾಡಿನ ಆ ಕರಾಳ ರಾತ್ರಿಗಳ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಈ ಸುದೀರ್ಘ ಸಂದರ್ಶನದಲ್ಲಿ ಅದೊಂದು ಮರೆಯಲಾಗದ, ನವಿರಾದ ಘಟನೆ ಎಂದಿರುವ ರಾಜ್, ಸಾಯಬೇಕೆಂದು ನಿರ್ಧರಿಸಿದ್ದು, ಆನೆಗಳನ್ನು ನೋಡಿದಾಗ ಆದ ಅನುಭವವ ಸ್ಮರಿಸುತ್ತಾ ಈಗಲೂ ಕಣ್ಮುಚ್ಚಿದರೆ ಕಾಡೇ ಕಣ್ಣಮುಂದೆ ಬರುತ್ತದೆ ಎಂದು ಹೇಳಿದ್ದಾರೆ. ಪತ್ನಿ, ಪುತ್ರರ ಧ್ವನಿಯನ್ನು ರೇಡಿಯೋದಲ್ಲಿ ಕೇಳಿದಾಗ ಕಣ್ಣಿರು ಬರುತ್ತಿತ್ತು ಎಂದಿರುವ ರಾಜ್ ತಾವು ಕಣ್ಣೀರು ಹಾಕುತ್ತಿದ್ದಾಗ ವೀರಪ್ಪನ್ ಸಹಚರರೇ ಸಮಾಧಾನ ಪಡಿಸುತ್ತಿದ್ದರು ಎಂದೂ ಹೇಳಿದ್ದಾರೆ.
ರೂಪಕ : ರಾಜ್ ಪತ್ನಿ, ಪುತ್ರರ ಪ್ರತಿಕ್ರಿಯೆ, ಆಯ್ದ ಅಭಿಮಾನಿಗಳ ಆನಂದದ ಮಾತುಗಳು, ರಾಜ್ಕುಮಾರ್ ಅನುಭವ, ಕಾಡಿನಿಂದ ಆಡಿದ ಕೆಲವು ಮಾತುಗಳ ತುಣುಕು ಹಾಗೂ ಅದಕ್ಕೆ ಪೂರಕವಾಗಿ ರಾಜ್ಕುಮಾರ್ ಹಾಡಿರುವ ಚಿತ್ರಗೀತೆಗಳನ್ನುಳ್ಳ ವಿಶೇಷ ರೂಪಕವನ್ನು ಆಕಾಶವಾಣಿ ಸಿದ್ಧಪಡಿಸಿದೆ. ಸುಮಾರು 100 ನಿಮಿಷಗಳ ಈ ಕಾರ್ಯಕ್ರಮ 10 ಕಂತುಗಳಲ್ಲಿ ನವೆಂಬರ್ 30ರ ಗುರುವಾರದಿಂದ 10 ದಿನಗಳ ಕಾಲ ಬೆಳಗ್ಗೆ 7-45ರಿಂದ 8 ಗಂಟೆವರೆಗೆ ಬಿತ್ತರವಾಗುತ್ತಿದೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...