ರಾಜ್ಯದ ರಸ್ತೆ, ಸೇತುವೆ ಸುಧಾರಣೆಗೆ ವಿಶ್ವಬ್ಯಾಂಕ್ನಿಂದ 2200 ಕೋಟಿ ರು desktop/Mobile
ಚಿತ್ರದುರ್ಗ : ನಮ್ಮ ಪೂರ್ವಿಕರು ಜನರ ಅನುಕೂಲಕ್ಕಾಗಿ ಮೂವತ್ತು ನಲವತ್ತು ಸಾವಿರ ಕೆರೆ ನಿರ್ಮಿಸಿದ್ದರು, ಇಂದು ಅವುಗಳಲ್ಲಿ ಬಹುತೇಕ ಕೆರೆಗಳು ಹಾನಿಯಾಗಿವೆ. ವಿಶ್ವಬ್ಯಾಂಕ್ನ 2200 ಕೋಟಿ ರುಪಾಯಿ ನೆರವಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಹಾಗೂ ರಸ್ತೆ ಮತ್ತು ಸೇತುವೆಗಳ ಸುಧಾರಣೆ ಮಾಡಲಾಗುವುದು ಎಂದು ಎಸ್.ಎಂ, ಕೃಷ್ಣ ಹೇಳಿದ್ದಾರೆ.
ಕಳೆದ ಆರು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ಹಾನಿಯ ವೈಮಾನಿಕ ಸಮೀಕ್ಷೆಗೆ ತೆರಳಿದ್ದ ಮುಖ್ಯಮಂತ್ರಿಗಳು , ಮಳೆಯಿಂದ ಅಪಾರ ಹಾನಿಗೊಳಗಾದ ಹೊಸದುರ್ಗ ತಾಲೂಕಿಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ನಂತರ ಹೊಸದುರ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಕೆರೆಗಳು ರೈತರ ಜೀವನಾಧಾರ. ಹೀಗಾಗಿ ರಾಜ್ಯದ 785 ಹೋಬಳಿಗಳಲ್ಲಿ ಒಂದೊಂದು ಕೆರೆಯ ಹೂಳೆತ್ತುವುದು, ಏರಿ ಭದ್ರಗೊಳಿಸುವುದು, ಕಲ್ಲು ಕಟ್ಟಡಗಳನ್ನು - ತಡೆಗಳನ್ನು ನಿರ್ಮಿಸುವುದು, ಕಾಲುವೆಗಳ ಅಭಿವೃದ್ಧಿ ಪಡಿಸುವ ಕಾರ್ಯಕ್ರಮವನ್ನು ರಾಜ್ಯ ಸರಕಾರ ಹಾಕಿಕೊಂಡಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈವರೆಗೆ 1600 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದರು.
ರಾಜ್ಯದ ಬಹುತೇಕ ಎಲ್ಲ ಕೆರೆಗಳೂ ಈಗ ಭರ್ತಿಯಾಗಿವೆ. ಮಳೆಗಾಲ ಮುಗಿದ ತರುವಾಯ ಕೆರೆಗಳ ದುರಸ್ತಿ ಕಾರ್ಯ ನಡೆಯಲಿದೆ. ಇದಕ್ಕೆ ವಿಶ್ವಬ್ಯಾಂಕ್ 1000 ರುಪಾಯಿ ನೀಡಲು ಒಪ್ಪಿದೆ ಎಂದು ಹೇಳಿದರು. ಇದೇ ರೀತಿ ರಾಜ್ಯದ ರಸ್ತೆ, ಸೇತುವೆಗಳ ಸುಧಾರಣೆ ಹಾಗೂ ಅಭಿವೃದ್ಧಿಗೆ ವಿಶ್ವಬ್ಯಾಂಕ್ 1200 ಕೋಟಿ ರುಪಾಯಿ ನೀಡುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಕೇಂದ್ರ ವಿತ್ತ ಸಚಿವರೊಂದಿಗೆ ಸಮಾಲೋಚನೆ ನಡೆಸಿದೆ ಎಂದರು.
ಮಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.