ಮೌನ ಮೊಗ್ಗೆಯ ಒಡೆದ ಮೆರವಣಿಗೆಯಲ್ಲಿಸಂಯಮದ ಮೇಲುಗೈ
ರಾಜ್ ಪುತ್ರರ ನೊಂದ ನುಡಿ, ಸಂಯಮದ ಮೇರು ಪ್ರದರ್ಶನ
ರಾಜಭವನದ ಮುಂದೆ ಕಲಾವಿದರು : (ಎಡದಿಂದ ಬಲಕ್ಕೆ) ಎಚ್.ಡಿ.ಕುಮಾರ ಸ್ವಾಮಿ, ದೇವರಾಜ್, ಎಸ್.ವಿ.ರಾಜೇ ಂದ್ರಸಿಂಗ್ ಬಾಬು, ಸಾ.ರಾ.ಗೋವಿಂದು, ರಾಕ್ಲೈನ್ ವೆಂಕಟೇಶ್, ನೆ.ಲ.ನರೇಂದ್ರಬಾಬು, ಶಿವರಾಜ್ಕುಮಾರ್, ಅಂಬರೀಶ್, ರವಿಚಂದ್ರನ್, ಪುನೀತ್, ಜಯಂತಿ. (ಚಿತ್ರ : ಕೆ.ಎಂ. ವೀರೇಶ್)
ಇಷ್ಟು ದಿನ ಶಾಂತಿಯಿಂದಿದ್ದ ಶಿವರಾಜ್ ಆಮರಣ ಉಪವಾಸ ಮುಷ್ಕರ ಕೈಗೊಳ್ಳುವುದಾಗಿ ಘೋಷಿಸಿದರು. ತಮ್ಮ ಈ ನೋವು - ಕೂಗು ಇನ್ನೂ ಏಕೆ ದಿಲ್ಲಿ ದೊರೆಗಳಿಗೆ ಮುಟ್ಟಿಲ್ಲ ಎಂಬ ಬಗ್ಗೆ ಅವರಿಗೆ ಆಕ್ರೋಶ.
ಯಾರು, ಹೇಗೆ ತಮ್ಮ ತಂದೆಯನ್ನು ಕರೆತರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅಪ್ಪಾಜಿ ಬರಬೇಕು ಎಂಬುದು ರಾಘವೇಂದ್ರ ರಾಜ್ ಕುಮಾರ್ ನುಡಿ. ಸುಪ್ರೀಂ ಕೋರ್ಟ್ ತೀರ್ಪು ಬರುವ ತನಕ ಕಾಯಲು ನಾವು ಸಿದ್ಧರಿಲ್ಲ. 28ರಂದು ಕರ್ನಾಟಕ ಬಂದ್ಗೆ ಕರೆನೀಡಿದ್ದೇವೆ ಎಂದರು. ಈ ನೋವಿನಲ್ಲೂ ಬಂದ್ ದಿನ ಶಾಂತಿಯಿಂದ ವರ್ತಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಪಾರ್ವತಮ್ಮ ರಾಜ್ಕುಮಾರ್ ಗುಣಮುಖ : 53 ದಿನಗಳಿಂದ ಪತಿಯ ಅಗಲಿಕೆಯ ಆತಂಕದಿಂದ ರಕ್ತದೊತ್ತಡ ಸಮಸ್ಯೆಗೆ ಒಳಗಾದ ಪಾರ್ವತಮ್ಮ ರಾಜ್ಕುಮಾರ್ ಅವರು ಮಲ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಮಧ್ಯೆ ಪಾರ್ವತಮ್ಮನವರ ಆರೋಗ್ಯದ ಬಗ್ಗೆ ವದಂತಿಗಳು ಮಿಂಚಿನಂತೆ ನಗರದಲ್ಲೇಲ್ಲಾ ಸಂಚರಿಸಿ, ಕೆಲ ಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಕೂಡಲೇ ಪಾರ್ವತಮ್ಮನರ ಆರೋಗ್ಯವಾಗಿದ್ದಾರೆ ಎಂಬ ಶುಭವಾರ್ತೆಯನ್ನು ನಗರಾದ್ಯಂತ ಪ್ರಸಾರ ಮಾಡಿ ಜನರ ಆತಂಕ ನಿವಾರಿಸಿದರು. ಖಾಸಗಿ ಚಾನೆಲ್ಗಳು ಕೂಡ ಪಾರ್ವತಮ್ಮ ರಾಜ್ ಆರೋಗ್ಯವಾಗಿದ್ದಾರೆ ಎಂಬ ಸುದ್ದಿಯನ್ನು ಪದೇಪದೇ ಪ್ರಸಾರ ಮಾಡಿದವು.
ಆದರೆ ಕೆಲವು ಕಿಡಿಗೇಡಿಗಳು ಹಬ್ಬಿಸಿದ ಈ ಸುದ್ದಿಯಿಂದಾಗಿ ನಗರದ ಬಹುತೇಕ ಶಾಲೆ - ಕಾಲೇಜುಗಳಿಗೆ ಮಧ್ಯಾಹ್ನ ರಜೆ ಘೋಷಿಸಲಾಯಿತು.
ಮೆರವಣಿಗೆ ಶಾಂತಿಯುತ ಮಡಿಯಾಳ್ : ವಿಶೇಷ ಅನುಮತಿಯ ಮೇರೆಗೆ ನಡೆದ ಮೌನ ಮೆರವಣಿಗೆ ಬಹುತೇಕ ಶಾಂತಿಯುತವಾಗಿತ್ತು ಎಂದು ಪೊಲೀಸ್ ಆಯುಕ್ತ ಮಡಿಯಾಳ್ ತಿಳಿಸಿದ್ದಾರೆ. ಮೆರವಣಿಗೆ ನಂತರ ಕೆಲವೆಡೆ ಕಲ್ಲು ತೂರಾಟ ನಡೆದ ಸಣ್ಣ ಅಹಿತಕರ ಘಟನೆಯನ್ನು ಹೊರತು ಪಡಿಸಿ ನಗರದಲ್ಲಿ ಶಾಂತಿ - ಸುವ್ಯವಸ್ಥೆಗೆ ಭಂಗ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕಿಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡದಂತೆ ಪ್ರಾರ್ಥಿಸಿರುವ ಅವರು, ಯಾವುದೇ ಅನುಮಾನಗಳು ಇದ್ದಲ್ಲಿ ಪೊಲೀಸ್ ಕೇಂದ್ರ ಕಚೇರಿಗೆ ಫೋನ್ ಮಾಡುವಂತೆ ಪ್ರಾರ್ಥಿಸಿದ್ದಾರೆ.
ಸಂಸದರ ದೆಹಲಿ ಚಲೋ : 28ರಂದು ಕರ್ನಾಟಕ ಬಂದ್ ನಡೆದ ತರುವಾಯ ಕೇಂದ್ರ ಸರಕಾದ ಮೇಲೆ ರಾಜ್ ಬಿಡುಗಡೆಗೆ ಒತ್ತಡ ತರಲು ರಾಜ್ಯದ ಎಲ್ಲ ಸಂಸತ್ ಸದಸ್ಯರ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೆ.ಸಿ.ಎನ್. ಚಂದ್ರಶೇಖರ್ ಹೇಳಿದ್ದಾರೆ.
ಮುಖಪುಟ / ರಾಜ್ ಅಪಹರಣ