ಶ್ರೀಗಂಧ ಮುಟ್ಟಿ ದರೂ ಕೃಷ್ಣರಿಗೆ ಕಾಡುಗಳ್ಳನ ನೆನಪು ಕಾಡುತ್ತದಂತೆ
ನವದೆಹಲಿ : ಹಗ್ಗ ಕಂಡು ಹೆದರುವವನ ಮೈಮೇಲೆ ಹಾವೇ ಬಿದ್ದರೆ ಇನ್ನೇನು ಗತಿ ಎಂಬ ಗಾದೆ ಇದೆ. ಈಗ ನಮ್ಮ ಮುಖ್ಯಮಂತ್ರಿಗಳಿಗೂ ಅಷ್ಟೇ ಕನಸಿನಲ್ಲಿ ಯಾರಾದರೂ ವೀರಪ್ಪನ್ ಎಂದರೆ ಹೆದರುತ್ತಾರೆ. ಅಷ್ಟೇಕೆ ಶ್ರೀಗಂಧ ನೋಡಿದರೂ ಅವರಿಗೆ ಶ್ರೀಗಂಧದ ಕಳ್ಳ ವೀರಪ್ಪನ್ ನೆನಪು ಬರುತ್ತದಂತೆ.
ನಿನ್ನೆ ಯೋಜನೆ ಆಯೋಗದ ಉಪಾಧ್ಯಕ್ಷರೊಂದಿಗೆ ಹಾಗೂ ರೈಲ್ವೆ ಸಚಿವರೊಂದಿಗೆ ರಾಜ್ಯದ ಯೋಜನೆಗಳ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದ ನಮ್ಮ ಹೈಟೆಕ್ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಶ್ರೀಗಂಧದ ಪ್ರತಿಮೆ ಸ್ಪರ್ಶವಾಗುತ್ತಿದ್ದಂತೆ ಗಂಧದ ಕಳ್ಳನ ಸ್ಮರಿಸಿಕೊಂಡಿದ್ದಾರೆ.
ರಾಜ್ ಬಿಡುಗಡೆಯ ಬಗ್ಗೆಯೇ ತಲೆ ಕೆಡಿಸಿಕೊಂಡಿರುವ ಮುಖ್ಯಮಂತ್ರಿಗಳು ಬಹುತೇಕ 53 ದಿನಗಳಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲಿದ್ದಾರೆ. ದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವರಾದ ಮಮತಾ ಬ್ಯಾನರ್ಜಿ ಅವರಿಗೆ ಶ್ರೀಗಂಧದ ತುಂಡಿನಲ್ಲಿ ಕೆತ್ತಿದ ಶ್ರೀಮನ್ನಾರಾಯಣನ ಮೂರ್ತಿಯನ್ನು ನೀಡುವ ಸಂದರ್ಭದಲ್ಲಿ ‘ಶ್ರೀಗಂಧ ನೋಡಿದರೂ ತಮಗೆ ಶ್ರೀಗಂಧ ಚೋರ, ಕಾಡುಕಳ್ಳ ವೀರಪ್ಪನ್ ನೆನಪಾಗುತ್ತದೆ ಎಂದು ಸ್ವತಃ ಅವರೇ ಹೇಳಿದ್ದಾರೆ.