ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್:ಚಿತ್ರೋದ್ಯಮ ನಿರ್ಧಾರ
ಬೆಂಗಳೂರು : ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ನಡೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಿತ್ರೋದ್ಯಮ ತೀರ್ಮಾನಿಸಿವೆ.
ಗುರುವಾರ ಕೆಂಪೇಗೌಡ ರಸ್ತೆಯ ಬನಪ್ಪ ಪಾರ್ಕ್ನಿಂದ ರಾಜಭವನದವರೆಗೆ ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ಚಿತ್ರ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರು ರಾಜ್ ತ್ವರಿತ ಬಿಡುಗಡೆಗೆ ಆಗ್ರಹಿಸಿ ರಾಜ್ಯಪಾಲರ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯಪಾಲರು ರಾಜಭವನದಲ್ಲಿ ಇರಲಿಲ್ಲ. ನಂತರ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಯಿತು.
ಕೆಂಪೇಗೌಡ ರಸ್ತೆಯಲ್ಲಿ ಕೆಲವು ಕಡೆ ಕಲ್ಲು ತೂರಾಟದ ಪ್ರಕರಣಗಳು ನಡೆದಿವೆ. ಮೆಜೆಸ್ಟಿಕ್ ಬಳಿ ಐದಾರು ಬಸ್ಸುಗಳನ್ನು ಜಖಂ ಮಾಡಲಾಗಿದೆ. ಉಳಿದಂತೆ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಗರದ ಎಲ್ಲೆಡೆ ಗಲಾಟೆ ವ್ಯಾಪಿಸಿದೆ ಎಂಬ ವದಂತಿ ಹಬ್ಬಿದ ಕಾರಣ ಕೆಲವು ಶಾಲೆಗಳು ತಂತಾವೇ ಮುಚ್ಚಿದವು. ತಮ್ಮ ತಮ್ಮ ಮಕ್ಕಳನ್ನು ಕರೆ ತರಲು ಅನೇಕರು ಧಾವಂತದಿಂದ ಶಾಲೆಗಳಿಗೆ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.
ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ , ರಾಜ್ ಬಿಡುಗಡೆಗೆ ಕೇಂದ್ರ ಸರ್ಕಾರ ತಲೆತೂರಿಸುವಂತೆ ಆಗ್ರಹಿಸಲಾಗಿದೆ ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ. ಈ ಬೆಳವಣಿಗೆಯಿಂದ ಈವರೆಗೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ಕಡೆ ಇದ್ದ ಜನರ ಗಮನ ಕೇಂದ್ರ ಸರ್ಕಾರದ ಕಡೆ ಹರಿಯುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಅಪಹರಣ