Get Updates
Get notified of breaking news, exclusive insights, and must-see stories!

ನೆಲದಿಂದ ದೂರ ..ಕೂಡಿದಾರ ...ಯಾರೂ ಹೊಡೆಯದ ಜೋಲಿ

ಎಮ್ಮೆ ಕಟ್ಟುವ ದೊಡ್ಡ ಹಗ್ಗದಲ್ಲಿಯೇ ಸೂತ್ರ ಹಾಕಿ, ಬಾವಿಯಲ್ಲಿ ನೀರು ಸೇದುವ ಹಗ್ಗಕ್ಕಿಂತ ಸ್ವಲ್ವವೇ ಚಿಕ್ಕದಾದ ಬಿಳಿಯ ಹೊಸೆದ ನೂಲಿನ ದಾರಗಳ ನೆರವಿನಿಂದ ಈ ಬೃಹತ್‌ ಪಟಗಳನ್ನು ಹಾರಿಸಲಾಯಿತು. ನೆರೆದಿದ್ದವರಿಗೆ ಇಷ್ಟು ಭಾರಿ ತೂಕದ, ಗಾತ್ರದ ಗಾಳಿಪಟಗಳು, ಹಗ್ಗದ ಭಾರವನ್ನೂ ಹೊತ್ತು ಮೇಲೆ ಹಾರಿಯಾವೆ? ಎಂಬ ಆತಂಕ. ಆದರೆ, ಗಂಟೆಗೆ 40 - 50 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದ್ದ ಮೇಲ್ಮೈ ಗಾಳಿ ಪಟಗಳನ್ನು ಎತ್ತರ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಂತೆಲ್ಲ ಬಾನಂಗಳದಲ್ಲಿ ಚಿತ್ತಾರ ಮೂಡಿದಂತೆ ಕಂಡು ಬಂತು.

ಕರಗ ಬಂತು ಕರಗ ಎಂಬಂತೆ, ಜೋರಾಗಿ ಗಾಳಿ ಬೀಸಿದೊಡನೆಯೇ, ಗಾಳಿ ಬಂತು ಗಾಳಿ ಎಂದು ಕೂಗುತ್ತಾ ಬೃಹತ್‌ ಪಟಗಳ ಸೂತ್ರಕ್ಕೆ ಬಿಗಿದ ಹಗ್ಗ ಹಿಡಿದ ಮಂದಿ ಎಗ್ಗಿಲ್ಲದೆ ಓಡುವ ಮೂಲಕ ತಮ್ಮ ಗಾಳಿಯ ಪಟಗಳನ್ನು ಆಗಸಕ್ಕೆ ಹಾರಿಸಲು ಯತ್ನಿಸುತ್ತಿದ್ದರು. ಕೆಲವರು ಯಶಸ್ವಿಯಾದರೆ, ಕೆಲವರು ಸುಸ್ತಾಗಿ ಕೂತರು.

ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಜಕ್ಕೂರು ಮೈದಾನದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮೈಸೂರು, ಮಂಡ್ಯ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಯಲಹಂಕ, ಬೆಂಗಳೂರಿನ ನೂರಾರು ಸ್ಪರ್ಧಿಗಳು ಆಗಮಿಸಿದ್ದರು. ಚಿಕ್ಕ ಮಕ್ಕಳು ತಮ್ಮಷ್ಟೇ ಚಿಕ್ಕದಾದ ಒಂಟಿ ಗಾಳಿ ಪಟಗಳನ್ನು ಈ ನೂರಾರು ದೊಡ್ಡ ಗಾಳಿಯ ಪಟಗಳ ನಡುವೆ ಹಾರಿಸಿ ಕೇಕೆ ಹಾಕಿ ಕುಣಿದರು. ಭಾನುವಾರ ಇಡೀ ದಿನ ಜಕ್ಕೂರು ಮೈದಾನದಲ್ಲಿ ನವಲೋಕದ ಸೃಷ್ಟಿ ಆಗಿತ್ತು.

ಬೆಳಗ್ಗೆ 11 ಗಂಟೆಗೆ ಈ ಸ್ಪರ್ಧೆಯ ಉದ್ಘಾಟನೆ ಇತ್ತಾದರೂ ಅದಕ್ಕೂ ಮುನ್ನ ನೂರಾರು ಗಾಳಿ ಪಟಗಳು ಬಾನಂಗಳನ್ನಲಂಕರಿಸಿದ್ದವು. ಮೇಲೆ ಮೇಲೆ ಹಾರುತ್ತಿದ್ದವು. ಕೆಲವೊಮ್ಮೆ ಗಾಳಿಯ ರಭಸ ಕಡಿಮೆ ಆದಾಗ ಪಟಗಳು ಗೋತಾ ಹೊಡೆದು ನೆಲಕಚ್ಚುತ್ತಿದ್ದವು, ಛಲ ಬಿಡದ ವಿಕ್ರಮಾದಿತ್ಯನಂತೆ ಪಟದ ಮಾಲಿಕರು ಮತ್ತೆ ಮತ್ತೆ ತಮ್ಮ ಪಟಗಳನ್ನು ಮೇಲಕ್ಕೆ ಹಾರಿಸುತ್ತಿದ್ದರು.

ಭಾನುವಾರ ಬಾನಂಗಳಕ್ಕೆ ಚಿಮ್ಮಿದ ಹತ್ತಾರು ಪಟಗಳಲ್ಲಿ ಮಾರಕ ರೋಗ ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಸಂದೇಶಗಳೂ ಕಂಡು ಬಂದವು. ಪರಿಸರದ ಮಹತ್ವನ್ನು ಸಾರುವ ಸಂದೇಶಗಳೂ ಅವುಗಳಲ್ಲಿ ಅಡಕವಾಗಿದ್ದವು. ಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ಭಗತ್‌ಸಿಂಗ್‌, ಗಣಪ, ಹುಲಿ, ಸಿಂಹ ಹೀಗೆ ನೂರಾರು ಆಕೃತಿಯ ಪಟಗಳು ನೋಡುಗರ ಕಣ್ಮನ ಸೆಳೆದವು.

ಸುಮಾರು 12 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ 6 ವರ್ಷದ ಚಿಣ್ಣರಿಂದ 60 ವರ್ಷದ ವೃದ್ಧರವರೆಗೆ ನೂರಾರು ಜನ ಭಾಗವಹಿಸಿದ್ದರು. ಜಾನಪದ ಲೋಕದ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಎಚ್‌.ಎಲ್‌. ನಾಗೇಗೌಡರು ಈ ಸ್ಪರ್ಧೆ ಉದ್ಘಾಟಿಸಿದರು. ಜಿ. ನಾರಾಯಣ ಹಾಜರಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲ, ತಮ್ಮ ಬಾಲ್ಯದ ದಿನಗಳಲ್ಲಿ ತಾವೂ ಕೆರೆಯ ಏರಿಯ ಮೇಲೆ ತಮ್ಮ ದೊಡ್ಡ ಪಟಕ್ಕೆ ನಾಯಿ ಮರಿಗಳನ್ನು ಕಟ್ಟಿ ಮೇಲಕ್ಕೆ ಹಾರಿಸಿ ಮೋಜು ಅನುಭವಿಸಿದ ಬಗ್ಗೆ ಹೇಳುತ್ತ, ಬಾಲ್ಯದಲ್ಲಿ ತಾವು ಆ ಮೂಕ ಪ್ರಾಣಿಗೆ ಉಂಟು ಮಾಡಿದ್ದ ನೋವಿನ ಬಗ್ಗೆ ಇಂದು ಪರಿತಪಿಸುತ್ತಿದ್ದರು.

ತಮ್ಮೂರ ಬಯಲಲ್ಲಿ ಪಟ ಹಾರಿಸಿದ ತಮ್ಮ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು, ಮರಕ್ಕೆ ಸಿಕ್ಕಿಕೊಂಡ ಗಾಳಿಯ ಪಟ ಬಿಡಿಸಲು ಮರ ಏರಿ ಬಿದ್ದು ಕಾಲು ಮುರಿದುಕೊಂಡಿದ್ದರಿಂದ ಹಿಡಿದು, ವಿದ್ಯುತ್‌ ಕಂಬ ಏರಲು ಹೋಗಿ ಒದೆ ತಿಂದ ನೆನಪುಗಳೆಲ್ಲ ಒಂದೊಂದಾಗಿ ಗರಿ ಬಿಚ್ಚಿಕೊಂಡವು.

ಸ್ಪರ್ಧೆ ಅಂದ ಮೇಲೆ ಫಲಿತಾಂಶ ಏನಾಯಿತೆಂಬ ಕುತೂಹಲ ಇಲ್ಲದಿದ್ದೀತೆ. ವಿವಿಧ ವರ್ಗಗಳ ಫಲಿತಾಂಶ ಇಂತಿದೆ: 12 ವರ್ಷದೊಳಗಿನ ಮಕ್ಕಳ ವಿಭಾಗ : ಕೆ. ನಿರಂಜನ್‌ - ಬೆಂಗಳೂರು (ಪ್ರಥಮ), ಎನ್‌. ಚಂದ್ರಶೇಖರ್‌ - ದೊಡ್ಡಬಳ್ಳಾಪುರ (ದ್ವಿತೀಯ), ರಾಘವೇಂದ್ರ ಪ್ರಸಾದ್‌, ಬೆಂಗಳೂರು (ತೃತೀಯ).

12ರಿಂದ 22 ವರ್ಷ ವಯಸ್ಸಿನವರ ವಿಭಾಗ : ಪಿ. ರೇಶ್ಮಾ , ಬೆಂಗಳೂರು (ಪ್ರಥಮ), ಜೆ.ಎ. ಚಂದ್ರಶೇಖರ್‌ (ದ್ವಿತೀಯ), ನಾಗರಾಜ್‌ (ತೃತೀಯ), 22 ವರ್ಷ ಮೇಲ್ಪಟ್ಟವರ ವಿಭಾಗ : ವಸಂತ ಸೆನಿಲ್‌, ಮಂಗಳೂರು (ಪ್ರಥಮ), ಎನ್‌. ಗಿರೀಶ್‌ (ದ್ವಿತೀಯ) ಮತ್ತು ಎಲ್‌. ನಾರಾಯಣ (ತೃತೀಯ). ತಂಡ ವಿಭಾಗದಲ್ಲಿ ಮಂಗಳೂರಿನ ಬಿ. ಸರ್ವೇಶ್ವರ ರಾವ್‌ ತಂಡ ಪ್ರಥಮ ಪರ್ಯಾಯ ಪಾರಿತೋಷಕ ಗಳಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+