ಸುಳ್ಳು ದಾಖಲೆ ನೀಡಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ

ತಾವು ಚುನಾಯಿಸುವ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು ಮತದಾರರ ಹಕ್ಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ನಾಮಪತ್ರದಲ್ಲಿ ಕಾಲಂಗಳನ್ನು ಖಾಲಿ ಬಿಡುವುದು ಮತ್ತು ಸುಳ್ಳು ವಿವರಗಳನ್ನು ನೀಡುವುದು ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸುಳ್ಳುವಿವರ ನೀಡುವುದು ಮತ್ತು ಕ್ರಿಮಿನಲ್ ಹಿನ್ನಲೆಯ ಮಾಹಿತಿಯನ್ನು ಮುಚ್ಚಿಟ್ಟು ನಾಮಪತ್ರ ಸಲ್ಲಿಸಿರುವುದು ತಿಳಿದರೆ, ಅಂತಹ ಅಭ್ಯರ್ಥಿ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವನ್ ಅವರ ಪೀಠ ಆದೇಶಿಸಿದೆ.
ನಾಗರೀಕ ಹಕ್ಕುಗಳ 'ರಿಸರ್ಜೆನ್ಸ್ ಇಂಡಿಯಾ' ಎಂಬ ಸಂಸ್ಥೆ 2008ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಆದೇಶ ನೀಡಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿವಿರಗಳನ್ನು ರಹಸ್ಯವಾಗಿ ಇಡುತ್ತಾರೆ.
ಆಸ್ತಿ ವಿವರ, ಕ್ರಿಮಿನಲ್ ಕೇಸುಗಳ ವಿವರಗಳನ್ನು ನೀಡದೆ ನಾಮಪತ್ರ ಸಲ್ಲಿಸುತ್ತಾರೆ. ಇದರಿಂದಾಗಿ ಮತದಾರರಿಗೆ ಅಭ್ಯರ್ಥಿ ಬಗ್ಗೆ ಎಲ್ಲಾ ವಿವರಗಳು ಲಭ್ಯವಾಗುವುದಿಲ್ಲ. ವಿವಿರಗಳನ್ನು ಮುಚ್ಚಿಟ್ಟ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಈ ಅರ್ಜಿಗೆ ಚುನಾವಣಾ ಆಯೋಗವೂ ತನ್ನ ಬೆಂಬಲ ವ್ಯಕ್ತಪಡಿಸಿತ್ತು. ಎನ್ಜಿಒ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ತಮ್ಮ ವಾದ ಮಂಡಿಸಿದ್ದರು. ಚುನಾವಣೆಗೆ ಸ್ಪರ್ಧಿಸುವುದು ಸಂವಿಧಾನಬದ್ಧ ಹಕ್ಕು, ನಾಮಪತ್ರದಲ್ಲಿ ಮಾಹಿತಿಯನ್ನು ಒದಗಿಸದಿದ್ದರೆ, ನಾಮಪತ್ರ ತಿರಸ್ಕರಿಸಬಾರದು ಎಂದು ಸರ್ಕಾರಿ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿತು.












Click it and Unblock the Notifications