Get Updates
Get notified of breaking news, exclusive insights, and must-see stories!

6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ

ಇಂದೋರ್, ಜನವರಿ 17: ನಗರಗಳ ಸ್ವಚ್ಛತೆ ದೇಶದ ಬಹುದೊಡ್ಡ ತಲೆನೋವುಗಳಲ್ಲಿ ಒಂದು. ಅಧಿಕಾರಿಗಳು ಮತ್ತು ಜನರು ಕೈಜೋಡಿಸಿದಾಗ ಮಾತ್ರ ಕಸದ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಬೆಂಗಳೂರಿನಂತೆಯೇ ವೇಗವಾಗಿ ಬೆಳೆಯುತ್ತಿರುವ ಮಧ್ಯಪ್ರದೇಶದ ರಾಜಧಾನಿ ಇಂದೋರ್ ನಗರದಲ್ಲಿಯೂ ಕಸದ ಸಮಸ್ಯೆ ಅಷ್ಟಿಷ್ಟಲ್ಲ. ಹೀಗಾಗಿಯೇ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಇಂದೋರ್ ಕಳಪೆ ಅಂಕಗಳನ್ನು ಪಡೆದುಕೊಂಡಿತ್ತು.

ನಗರದ ಒಳಗೆ ಕಸದ ರಾಶಿ ಬೀಳುತ್ತಿದ್ದರೆ, ಕೆಲವು ಕಿ.ಮೀ. ದೂರದಲ್ಲಿ ಇರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಾಗವೇ ಇಲ್ಲದಷ್ಟು ಪ್ಲಾಸ್ಟಿಕ್, ಲೋಹ ಸೇರಿದಂತೆ ಪರಿಸರವನ್ನು ಸಾಧ್ಯವಾದಷ್ಟು ಹಾಳುಮಾಡುವ ವಸ್ತುಗಳು ತುಂಬಿಕೊಂಡಿದ್ದವು.

ಅಲ್ಲಿ ಕಸದ ಬೆಟ್ಟ ನಿರ್ಮಾಣ ಆಗುತ್ತಿದ್ದರೆ ಬಟ್ಟೆ, ಪ್ಲಾಸ್ಟಿಕ್, ಮರ ಹಾಗೂ ಕಾಗದದ ತುಂಡುಗಳಂತಹ ವಸ್ತುಗಳನ್ನು ಕರಗಿಸಲು ಬೆಂಕಿ ಹಚ್ಚಲಾಗುತ್ತಿತ್ತು. ಈ ಮೂಲಕ ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತಿತ್ತು.

2014ರಲ್ಲಿ ಇಂದೋರ್‌ಗೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಿರಾಶಾದಾಯಕ ಶ್ರೇಣಿ ದೊರಕಿದಾಗ ನಗರದ ಸನ್ನಿವೇಶವನ್ನು ಬದಲಿಸಲು ಅಧಿಕಾರಿಗಳು ಮತ್ತು ನಾಗರಿಕರು ಪರಸ್ಪರ ನಿರ್ಧರಿಸಿ ಕೈಜೊಡಿಸಿದರು.

ಅವರ ಪ್ರಯತ್ನ ಈಗ ಫಲಕಾರಿಯಾಗಿದೆ. ಈ ನಗರ ಮೂರು ವರ್ಷದಲ್ಲಿ ಭಾರತದಲ್ಲಿಯೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎದುರಿಗಿತ್ತು ಕಸದ ದೈತ್ಯ ಬೆಟ್ಟದ ಸವಾಲು

ಎದುರಿಗಿತ್ತು ಕಸದ ದೈತ್ಯ ಬೆಟ್ಟದ ಸವಾಲು

ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂಬ ತೀರ್ಮಾನಕ್ಕೆ ನಾಗರಿಕರು ಬಂದರು. ಆದರೆ, ಹತ್ತಾರು ವರ್ಷಗಳಿಂದ ಇಡೀ ನಗರದ ಕಸವನ್ನು ತುಂಬಿಕೊಂಡು ಬೃಹತ್ ಬೆಟ್ಟವಾಗಿದ್ದ 100 ಎಕರೆ ಪ್ರದೇಶದ ತ್ಯಾಜ್ಯ ವಿಲೇವಾರಿ ಸ್ಥಳವನ್ನು ಹೇಗೆ ಸ್ವಚ್ಛಗೊಳಿಸುವುದು? ಈ ಪ್ರಶ್ನೆ ಕಸದ ರಾಶಿಯಷ್ಟೇ ದೊಡ್ಡದಾಗಿತ್ತು.

ಚಿತ್ರಣ ಬದಲಿಸಿದ ಆಶೀಶ್ ಸಿಂಗ್

ಚಿತ್ರಣ ಬದಲಿಸಿದ ಆಶೀಶ್ ಸಿಂಗ್

ಈ ಕಸವನ್ನು ಜೈವಿಕ ವಿಧಾನದ ಮೂಲಕ ಕರಗಿಸುವ ಪ್ರಯತ್ನಕ್ಕೆ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ (ಐಎಂಸಿ) ಮುಂದಾದರೂ ಆ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿತ್ತು.

ಈ ಸಮಸ್ಯೆ ಮೂರು ವರ್ಷವೂ ಮುಂದುವರಿದಿತ್ತು. ಆದರೆ, 2018ರ ಮೇ ತಿಂಗಳಿನಲ್ಲಿ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಕಮಿಷನರ್ ಆಗಿ ಐಎಎಸ್ ಅಧಿಕಾರಿ ಆಶೀಶ್ ಸಿಂಗ್ ನೇಮಕವಾದ ಬಳಿಕ ಇಡೀ ನಗರದ ಚಿತ್ರಣವೇ ಬದಲಾಯಿತು.

13 ಲಕ್ಷ ಟನ್ ಕಸದ ರಾಶಿ

ಆಶೀಶ್ ಸಿಂಗ್ ಐಎಂಸಿಗೆ ಸೇರಿಕೊಂಡಾಗ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಸುಮಾರು 13 ಲಕ್ಷ ಟನ್ ಕಸದ ರಾಶಿಯಿತ್ತು. ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಪಾಲಿಕೆಯಿಂದ ಕೇವಲ 2 ಲಕ್ಷ ಟನ್ ಕಸ ಸಂಸ್ಕರಣೆ ಮಾಡಲು ಸಾಧ್ಯವಾಗಿತ್ತು. ಈ ತೆರೆದ ಘಟಕದ ಸಮೀಪದಲ್ಲಿರುವ ನಿವಾಸಿಗಳು ಮಾಲಿನ್ಯದ ಶಾಪವನ್ನು ಅನುಭವಿಸುವಂತಾಗಿತ್ತು. ಅಲ್ಲದೆ, ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಬಳಕೆಯಾಗಬೇಕಿದ್ದ ಜಾಗ ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿತ್ತು.

2016-17ರಲ್ಲಿ ಸುಧಾರಣಾ ಯೋಜನೆ ಆರಂಭವಾದಾಗ ಐಎಂಸಿ ಅದನ್ನು ಹೊರಗುತ್ತಿಗೆಗೆ ಒಪ್ಪಿಸಿತ್ತು. ಅದೇ ವರ್ಷ ಮಿಶ್ರ ತ್ಯಾಜ್ಯವನ್ನು ಕೆಳಪ್ರದೇಶಗಳಲ್ಲಿ ಮತ್ತು ತೆರೆದ ಪ್ರದೇಶಗಳಲ್ಲಿ ಎಸೆಯುವುದನ್ನು ನಿಷೇಧಿಸಲಾಯಿತು.

ಆದರೆ, ಕೆಲಸವನ್ನು ಹೊರಗುತ್ತಿಗೆ ನೀಡುವುದರಿಂದ ಅಭಿವೃದ್ಧಿ ಬಲು ನಿಧಾನ ಮತ್ತು ತುಂಬಾ ದುಬಾರಿ ಎಂಬುದು ಅರಿವಾಯಿತು.

ಗಾಲ್ಫ್ ಕೋರ್ಸ್ ಕನಸು ಹೊತ್ತ ಸಿಂಗ್

ಗಾಲ್ಫ್ ಕೋರ್ಸ್ ಕನಸು ಹೊತ್ತ ಸಿಂಗ್

ಬಾಲ್ಯದಿಂದಲೂ ನಾಗರಿಕ ಸೇವೆಗೆ ಸೇರಬೇಕು ಎಂಬ ಕನಸು ಕಂಡಿದ್ದ ಆಶೀಶ್ ಸಿಂಗ್, ಈ ಯೋಜನೆಯನ್ನು ವಿಭಿನ್ನವಾದ ಮಾದರಿಯಲ್ಲಿ ಕೊಂಡೊಯ್ಯಲು ದೃಢ ನಿರ್ಧಾರ ಮಾಡಿದರು. ಅದನ್ನು ಅತಿ ಕಡಿಮೆ ಅವಧಿಯಲ್ಲಿ ಹಾಗೂ ಐಎಂಸಿಗೆ ಆರ್ಥಿಕ ಹೊರೆಯಾಗದಂತೆ ಪೂರ್ಣಗೊಳಿಸಲು ತೀರ್ಮಾನಿಸಿದರು.

ಈ ಕಸ ಸುರಿಯುವ ಮೈದಾನವನ್ನು ಅವರು ಜನರು ಮತ್ತೆ ಮತ್ತೆ ಭೇಟಿ ನೀಡುವಂತಹ ಸುಂದರ ಗಾಲ್ಫ್ ಕೋರ್ಸ್ ಆಗಿ ಪರಿವರ್ತಿಸುವ ಯೋಜನೆಯೊಂದಿಗೆ ಕೆಲಸ ಆರಂಭಿಸಿದರು.

ಜೈವಿಕ ಪರಿಹಾರವು ಮಣ್ಣು ಮತ್ತು ಪ್ಲಾಸ್ಟಿಕ್, ಲೋಹ, ಕಾಗದ, ಬಟ್ಟೆ ಮತ್ತಿತರ ಮರುಬಳಕೆ ಮಾಡಬಹುದಾದ ಘನ ತ್ಯಾಜ್ಯಗಳನ್ನು ಪ್ರತ್ಯೇಕಿಸುವ ಪರಿಸರ ಸ್ನೇಹಿ ತಂತ್ರವಾಗಿದೆ. ಸಮರೋಪಾದಿಯಲ್ಲಿ ಕೆಲಸ ಆರಂಭಿಸಲಾಯಿತು. 2018ರ ಡಿಸೆಂಬರ್ 5ರ ವೇಳೆಗೆ ಅಂದಾಜು 13 ಲಕ್ಷ ಟನ್ ಕಸಕ್ಕೆ ಜೈವಿಕ ಪರಿಹಾರ ಕಂಡುಕೊಳ್ಳಲಾಗಿತ್ತು.

ಹತ್ತು ಕೋಟಿ ವೆಚ್ಚದಲ್ಲೇ ಪೂರ್ಣ

ಹಿಂದಿನ ಯೋಜನೆಗಳಂತೆ ಯಾವುದೇ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡದೆ ಇರಲು ನಿರ್ಧರಿಸಿದೆವು. ಕ್ಯುಬಿಕ್ ಮೀಟರ್‌ಗೆ 500 ರೂ. ಪಡೆಯುತ್ತಿದ್ದರು. ಇದರಿಂದ ನಮಗೆ ಇಡೀ ತ್ಯಾಜ್ಯ ರಾಶಿಯನ್ನು ಕರಗಿಸಲು ಸುಮಾರು 65 ಕೋಟಿ ವೆಚ್ಚವಾಗುತ್ತಿತ್ತು. ಅದು ನಮ್ಮ ಆರ್ಥಿಕ ಸಾಮರ್ಥ್ಯವನ್ನು ಮೀರಿದ್ದು. ಬೃಹತ್ ಪ್ರಮಾಣದ ಭಾರಿ ಯಂತ್ರಗಳು ಬೇಕಿದ್ದವು.

ಹೀಗಾಗಿ ನಾವು ಕೆಲವು ಯಂತ್ರಗಳನ್ನು ಬಾಡಿಗೆಗೆ ತೆಗೆದುಕೊಂಡು ನಮ್ಮ ಖರ್ಚಿನಲ್ಲಿ ಕಾರ್ಯಾಚರಣೆ ನಡೆಸಿದೆವು. ಎರಡು ಪಾಳಿಗಳಲ್ಲಿ ಈ ಯಂತ್ರಗಳನ್ನು ಓಡಿಸಿ ಆರು ತಿಂಗಳಿನಲ್ಲಿ ಕೆಲಸ ಪೂರ್ಣಗೊಳಿಸಿದೆವು. ಆಸಕ್ತಿಕರ ಸಂಗತಿಯೆಂದರೆ ನಾವು ಇಡೀ ಪ್ರಕ್ರಿಯೆಗೆ 10 ಕೋಟಿಗೂ ಕಡಿಮೆ ವೆಚ್ಚ ವ್ಯಯಿಸಿದ್ದೆವು ಎಂದು ಆಶೀಶ್ ವಿವರಿಸುತ್ತಾರೆ.

ಕಸದ ಮರುಬಳಕೆಗೆ ರವಾನೆ

ಕಸದ ಮರುಬಳಕೆಗೆ ರವಾನೆ

ಕಸದ ರಾಶಿಯಿಂದ ಮೊದಲು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬೇರ್ಪಡಿಸಿ ಸಂಸ್ಕರಣೆಗೆ ಕಳುಹಿಸಲಾಯಿತು. ಪಾಲಿಥೀನ್‌ಗಳನ್ನು ಸಿಮೆಂಟ್ ಘಟಕಗಳಿಗೆ ಮತ್ತು ರಸ್ತೆ ಕಾಮಗಾರಿಗಳಿಗೆ ರವಾನಿಸಲಾಯಿತು. ಸಂಪೂರ್ಣ ಸ್ವಚ್ಛಗೊಂಡ ಭೂಮಿಯಲ್ಲಿ ಈಗ ಹಸಿರು ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ. ಅಲ್ಲಿ ದೊರೆತ ನಿರ್ಮಾಣ ಹಾಗೂ ಅವಶೇಷ ತ್ಯಾಜ್ಯಗಳನ್ನು ಕಟ್ಟಡ ಸಾಧನಗಳನ್ನು ಉತ್ಪಾದಿಸಲು ಸಾಧ್ಯವಾಗುವಂತೆ ನಿರ್ಮಾಣ ಹಾಗೂ ತೆರವು ಪ್ರಕ್ರಿಯೆ ಘಟಕಗಳಿಗೆ ನೀಡಲಾಗಿದೆ. ಉಳಿದ ಸುಮಾರು ಶೇ 15ರಷ್ಟು ತ್ಯಾಜ್ಯ ಸುರಕ್ಷಿತವಾಗಿ ಹೂಳಲಾಯಿತು.

ಈಗ ಮರಳಿ ಪಡೆದ ಭೂಮಿಯ ಮೌಲ್ಯ ಸುಮಾರು 400 ಕೋಟಿ ರೂ.ದಷ್ಟಿದೆ. ಅದನ್ನು ಗಾಲ್ಫ್‌ ಕೋರ್ಸ್ ಆಗಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ.

ಕಸ ವಿಲೇವಾರಿ ಮತ್ತು ಸಂಸ್ಕರಣೆ ಪ್ರಮುಖ ಸಮಸ್ಯೆಗಳಾಗಿರುವ ನಗರಗಳಲ್ಲಿ ಬದ್ಧತೆ, ಅಧಿಕಾರಿಗಳು ಹಾಗೂ ನಾಗರಿಕರ ಸಹಕಾರ ಮತ್ತು ಸಮರ್ಪಕ ಯೋಜನೆ ಇದ್ದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದಕ್ಕೆ ಆಶೀಶ್ ಸಿಂಗ್ ನೇತೃತ್ವದ ತಂಡ ಸಾಬೀತುಪಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+