ಶೌಚಾಲಯ... ಇಲ್ಲಿ ಸ್ವಚ್ಛತೆಯ ಪ್ರತೀಕ, ಸಬಲೀಕರಣದ ದ್ಯೋತಕ
ಪುಣೆ, ಅಕ್ಟೋಬರ್ 25: ಸ್ವಚ್ಛಭಾರತ ಅಭಿಯಾನ, ಆರೋಗ್ಯದ ಕುರಿತ ಕಾಳಜಿ ಎಲ್ಲವೂ ಸೇರಿ ಇದೀಗ ಶೌಚಾಲಯ ಬಳಕೆಯ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಮೂಡಿದೆ.
ಆದರೂ ಭಾರತದ ಕೆಲವು ಹಿಂದುಳಿದ ಜಿಲ್ಲೆಗಳಲ್ಲಿ ಇಂದಿಗೂ ಬಯಲು ಮಲವಿಸರ್ಜನೆ ಪದ್ಧತಿಯನ್ನು ಕಾಣುತ್ತೇವೆ. ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಖೇದ್ ತಲುಕಾ ಎಂಬ ಹಳ್ಳಿಯೂ ಇದಕ್ಕೆ ಹೊರತಾಗಿರಲಿಲ್ಲ.
ಸರ್ಕಾರವೇ ಶೌಚಾಲಯ ಕಟ್ಟಿಕೊಟ್ಟರೂ ಅದನ್ನು ಬಳಕೆ ಮಾಡುವ ಬಗ್ಗೆ ಎಷ್ಟೋ ಜನರಲ್ಲಿ ಅರಿವು ಇರಲಿಲ್ಲ. ಕೆಲವರು ಬಳಸಿದರೂ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಚಿಂತಿಸುತ್ತಿರಲಿಲ್ಲ. ಜೊತೆಗೆ ಮಲ ತುಂಬಿಕೊಳ್ಳುವ ಗುಂಡಿಯನ್ನು ಸ್ವಚ್ಛಗೊಳಿಸುವ ಬಗ್ಗೆಯೂ ಯಾರಿಗೂ ಅರಿವಿರಲಿಲ್ಲ.
ಈ ಊರಿಗೆ ಹೊಸ ದಿಶೆಯನ್ನು ತೋರಿಸಿದವರು ಜಿಲ್ಲಾಧಿಕಾರಿ ಆಯುಷ್ ಪ್ರಸಾದ್.

ಆಶಾಕಿರಣವಾಗಿ ಬಂದ ಆಯುಷ್ ಪ್ರಸಾದ್
ಶೌಚಾಲಯದ ಬಳಕೆಯಿಂದಾಗುವ ಉಪಯೋಗದ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲದ ಈ ಊರಿಗೆ ಆಶಾಕಿರಣವಾಗಿ ಬಂದವರು ಐಎಎಸ್ ಅಧಿಕಾರಿ ಆಯುಷ್ ಪ್ರಸಾದ್. ಜನರಲ್ಲಿ ಶೌಚಾಲಯವನ್ನು ಬಳಸಬೇಕಾದ ಅಗತ್ಯ ಮತ್ತು ಅದರಿಂದ ಆರೋಗ್ಯಕ್ಕಾಗುವ ಉಪಯೋಗದ ಬಗ್ಗೆ ಅರಿವು ಮೂದಿಸುವ ಕೆಲಸವನ್ನು ಅವರು ಮೊದಲು ಆರಂಭಿಸಿದರು.
ಸಬಲೀಕರಣದ ಹಾದಿ ತೋರಿದರು!
ಶೌಚಾಲಯದ ತ್ಯಾಜ್ಯ ಮಣ್ಣು ಸೇರಿದ ನಂತರ ಈ ಮಣ್ಣು ಸಾಕಷ್ಟು ಫಲವತ್ತಾಗುತ್ತದೆ ಎಂಬುದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ ಎಂಬುದನ್ನು ಇವರು ಸಾಕ್ಷಿಗ ಮೂಲಕವೇ ಜನರಿಗೆ ಮನಮುಟ್ಟುವಂತೆ ತೋರಿಸಿಕೊಟ್ಟರು. ಮಲದ ಗುಂಡಿಯಲ್ಲಿ ಉಳಿಯುವ ತ್ಯಾಜ್ಯಗಳನ್ನು ಹೇಸಿಗೆಯಿಂದ ನೋಡುವ ಅಗತ್ಯವಿಲ್ಲ. ಅದನ್ನು ಸ್ವಚ್ಛಗೊಳಿಸಿ, ಅದೇ ಮಣ್ಣನ್ನು ಗೊಬ್ಬರವಾಗಿ ಉಪಯೋಗಿಸುವುದಕ್ಕೆ ಸಾಧ್ಯವಿದೆ ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ರಸಗೊಬ್ಬರಕ್ಕಿಂತ ಉತ್ತಮ
ಕೆಲವು ಸಂಶೋಧನೆಗಳನ್ನು ನಡೆಸಿದ ಆಯುಷ್, ಈ ಮಣ್ಣಿನಿಂದ ಮಾಡುವ ಗೊಬ್ಬರವು ರಸಗೊಬ್ಬರಗಳಿಗಿಂತ ಉತ್ತಮ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೆಜಿಗೆ 20 ರೂಪಾಯಿಯಂತೆ ಈ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ಒಂದು ಮಲದ ಗುಂಡಿಯಿಂದ ಸುಮಾರು ಎಂಬತ್ತು ಕೆಜಿಗೂ ಅಧಿಕ ಗೊಬ್ಬರ ತಯಾರಿಸಬಹುದು ಎನ್ನುತ್ತಾರೆ ಆಯುಷ್.

ಸ್ವಚ್ಛತೆ ಜೊತೆ ಸಬಲೀಕರಣ
ಆಯುಷ್ ಅವರೊಂದಿಗೆ ಇಂದಿರಾ ಅಸ್ವರ್ ಮತ್ತು ಸೋನಾಲಿ ಅವ್ಚತ್ ಎಂಬ ಇಬ್ಬರು ಐಎಎಸ್ ಅಧಿಕಾರಿಗಳಿ ಕೈಜೋಡಿಸಿದ್ದಾರೆ. ಇದೀಗ ಈ ಗ್ರಾಮದಲ್ಲಿ ಶೌಚಾಲಯಗಳು ಕೇವಲ ಸ್ವಚ್ಛತೆಯ ಪ್ರತೀಕ ಮಾತ್ರವಲ್ಲದೆ, ಸಬಲೀಕರಣದ ದ್ಯೋತಕವೂ ಆಗಿವೆ!












Click it and Unblock the Notifications