Get Updates
Get notified of breaking news, exclusive insights, and must-see stories!

ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಬರಲ್ಲ, ಸಿದ್ಧವಾಗಿಯೇ ಇರಿ!

"ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಯಾವತ್ತೂ ಬರುವುದಿಲ್ಲ. ಆದ್ದರಿಂದ ಯಾವಾಗಲೂ ಸಿದ್ಧವಾಗಿಯೇ ಇರಿ!"

ಬದುಕಿನ ನೀತಿ, ಜಾಣ್ಮೆ, ವ್ಯವಹಾರ, ಅಸ್ತಿತ್ವ, ಸತ್ಯ, ನೇರವಂತಿಕೆ, ವೇದಾಂತವೆಲ್ಲವನ್ನೂ ಒಳಗೊಂಡಿರುವ ಈ ಮಾತಿನ ತೂಕವನ್ನು ಅಳೆಯಲು ಸಾಧ್ಯವೇ ಇಲ್ಲ. ಒಂದು ಸಾಲಿನ ಮಾತಿನಲ್ಲಿ ಎಷ್ಟೆಲ್ಲ ಬದುಕಿನ ಸಾರ ಅಳವಡಿಕೆಯಾಗಿದೆ.

ಇದನ್ನು ಆಡಿದವರು ಬೇರಾರೂ ಅಲ್ಲ, ಗ್ರಾಹಕರನ್ನು ಹುಡುಕಿಕೊಂಡು ಹೋಗದೆಯೂ ಗ್ರಾಹಕರಿದ್ದಲ್ಲಿಯೇ ಸೇವೆಯನ್ನು ಸಲ್ಲಿಸುವ ನಾಪಿತ. ಇವರು ಮುಂಬೈ ನಿವಾಸಿ. ಸಂಚಾರಿ ನಾಪಿತ ಎಂದೇ ಇವರಿಗೆ ಹೆಸರು. ಅಂಗಡಿಯಿಲ್ಲ, ಮುಂಗಟ್ಟಿಲ್ಲ, ಬಾಡಿಗೆ ಕಟ್ಟುವ ದರ್ದಿಲ್ಲ, ಗ್ರಾಹಕ ತನ್ನಲ್ಲಿಯೇ ಬರಲಿ ಎಂಬ ಆಗ್ರಹವೂ ಇಲ್ಲ!

"ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಯಾವತ್ತೂ ಬರುವುದಿಲ್ಲ. ಆದ್ದರಿಂದ ಯಾವಾಗಲೂ ಸಿದ್ಧವಾಗಿಯೇ ಇರಿ!" ಎಂಬ ಧ್ಯೇಯವನ್ನೇ ಇಟ್ಟುಕೊಂಡು ಕಳೆದ ಐದು ವರ್ಷಗಳಿಂದ ಗಲ್ಲಿ ಗಲ್ಲಿ ಅಲೆಯುತ್ತ, ಸಿಕ್ಕ ಗ್ರಾಹಕನ ಶೇವಿಂಗ್ ಮಾಡುತ್ತ, ಕೈತುಂಬ ದುಡಿಯುತ್ತಲೇ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿರುವ ವ್ಯಕ್ತಿಯ ಅಪರೂಪದ ಕಥೆಯಿದು.

ಇವರ ಕಥೆಯೂ ಅಷ್ಟೇ ಸ್ವಾರಸ್ಯಕರವಾಗಿದೆ. ಇವರು ಕೆಲ ವರ್ಷಗಳ ಹಿಂದೆ ಎತ್ತಿಗೆ ನೊಗವನ್ನು ಹಾಕಿ ಹೊಲದಲ್ಲಿ ಉಳುಮೆ ಮಾಡುತ್ತ ಕೃಷಿಯನ್ನು ಮಾಡುತ್ತಿದ್ದರು. ಬರಬರುತ್ತ ಮಕ್ಕಳು ದೊಡ್ಡವರಾದರು, ಕಾಲೇಜು ಮೆಟ್ಟಲೇರಿದರು. ರೈತನ ಮಕ್ಕಳು ರೈತರೇ ಆಗಬೇಕಂತೇನೂ ಇಲ್ಲವಲ್ಲ? ಅದಕ್ಕಾಗಿಯೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿದರು.

ಆದರೆ, ದುಡಿದದ್ದು ಸಾಲಬೇಕಲ್ಲ, ತುಂಬಿದ ಸಂಸಾರದ ನೊಗವನ್ನೂ ಹೊರಬೇಕಲ್ಲ? ಇದಕ್ಕಾಗಿಯೇ ಅವರು ಕೃಷಿಗೆ ತಿಲಾಂಜಲಿಯಿತ್ತು, ವಂಶಪಾರಂಪರ್ಯವಾಗಿ ಬಂದಿದ್ದ ನಾಪಿತ ವೃತ್ತಿಯನ್ನು ಆಯ್ದುಕೊಂಡರು. ಇಲ್ಲಿ ದುಡ್ಡಿದೆ, ಹಾಗಾಗಿ ನಾನು ಇಲ್ಲಿದ್ದೇನೆ ಎಂದು ಅವರು ಸಂತಸದಿಂದ ಹೇಳುತ್ತಾರೆ. ದುಡಿಮೆಗೆ, ಹೊಟ್ಟೆ ಹೊರೆಯಲು ಯಾವ ವೃತ್ತಿಯಾದರೇನು? ಗಳಿಸುವುದನ್ನು ಗೌರವದಿಂದ ದುಡಿದು ಗಳಿಸಿದರಾಯಿತು.

ಕೈಯಲ್ಲಿ ಕ್ಷೌರ ಮಾಡುವ ಕಿಟ್ಟನ್ನು ಹಿಡಿದುಕೊಂಡು ಮನೆಯಿಂದ ಹೊರಟುಬಿಡುತ್ತಾರೆ. ಗಲ್ಲಿಗಲ್ಲಿ, ಬಡಾವಣೆ ಬಡಾವಣೆ ಸುತ್ತುತ್ತಾರೆ. ಯಾರಿಗಾದರೂ ಕ್ಷೌರ ಮಾಡಿಸಿಕೊಳ್ಳುವ ಅಗತ್ಯವಿದ್ದರೆ ನಿಂತ ನಿಂತಲ್ಲಿಯೇ ಕೂತು ಕ್ಷೌರ ಮಾಡಲು ಆರಂಭಿಸುತ್ತಾರೆ. ಈ ಕಾರಣದಿಂದಾಗಿಯೇ ಅವರು ಜನಪ್ರಿಯತೆಯನ್ನೂ ಗಳಿಸಿದ್ದಾರೆ.

ಜೀವನ ಹೇಗೆ ನಡೆಸಿಕೊಂಡು ಹೋಗುತ್ತದೋ ಹಾಗೆ ನಡೆಯುವುದೇ ಬದುಕು ಅಲ್ಲವೆ? "ದಯವಿಟ್ಟು ನನಗೆ ಕೆಲಸ ಮಾಡಲು ಬಿಡಿ, ವಟವಟ ಮಾತಾಡುತ್ತ ಗ್ರಾಹಕನ ಮೀಸೆಯನ್ನೇ ಎಗರಿಸಿದರೆ?" ಎನ್ನುವ ಅವರ ಮಾತಲ್ಲಿ ಹಾಸ್ಯಪ್ರಜ್ಞೆ ಚಿಮ್ಮುತ್ತದೆ. "ನೀವೇನೂ ಹೆದರ್ಕೋಬೇಡಿ ಸಾರ್, ನಿಮ್ಮ ಮೀಸೆಯನ್ನೇನೂ ಎಗರಿಸಲ್ಲ" ಅಂತ ಗ್ರಾಹಕನಿಗೆ ಅಭಯ ತೋರಿ ತಮ್ಮ ಕೆಲಸ ಮುಂದುವರಿಸುತ್ತಾರೆ.

ಇಂಥದೊಂದು ವಿಶಿಷ್ಟ ಬಗೆಯ ವ್ಯಕ್ತಿಯ ವಿಶಿಷ್ಟ ಕಥೆ ಹ್ಯೂಮನ್ಸ್ ಆಫ್ ಬಾಂಬೆ ಫೇಸ್ ಬುಕ್ ಪುಟದಲ್ಲಿ ಪ್ರಕಟವಾಗಿದೆ. ನಾಪಿತರ ಇಂದಿನ ಜೀವನ ಹೇಗಿದೆಯೋ ಬಲ್ಲವರಾರು? ಕೆಲವರು ವಿಪರೀತ ಶ್ರೀಮಂತರಾಗಿದ್ದರೆ ಕೆಲವರು ವಿಪರೀತ ಬಡತನದಲ್ಲಿಯೇ ಇರುವ ನಾಪಿತರನ್ನೂ ನಾವು ಕಾಣಬಹುದು. ಜನರ ಜೀವನಶೈಲಿಗೆ ತಕ್ಕಂತೆ ಅವರ ವ್ಯಾಪಾರವೂ ಬದಲಾಗುತ್ತಾ ಸಾಗಿದೆ.

ಆದರೆ, ಇಂದಿನ ಕಾಲದಲ್ಲಿ ಈರೀತಿ ಬೀದಿಬೀದಿ ಸುತ್ತುತ್ತ ಕ್ಷೌರ ಮಾಡುವವರನ್ನು ಎಲ್ಲಾದರೂ ಕಂಡಿದ್ದೀರಾ? ಮೊದಲು ಒಂದು ವರ್ಗದವರು ಮಾತ್ರ ಈ ವೃತ್ತಿಯಲ್ಲಿ ನಿರತರಾಗಿರುತ್ತಿದ್ದರು. ಆದರೆ, ಇದು ಇಂದು ಲಕ್ಷಗಟ್ಟಲೆ ಬಾಚುವ ವ್ಯಾಪಾರವಾಗಿದೆ. ಅಪ್ಡೇಟ್ ಆಗದೆ ಹಳೆಯ ಕಾಲದ ಕನ್ನಡ, ಕತ್ತರಿ ಇಟ್ಟುಕೊಂಡವರು ದುಡಿಮೆಯ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದ್ದಾರೆ.

ಈ ನಾಪಿತನ ನಗುಮೊಗದ ಫೋಟೋವನ್ನು ನೋಡುತ್ತಲೇ ಒಬ್ಬರ ಪ್ರತಿಕ್ರಿಯೆ ಹೀಗಿದೆ : "ಆಹಾ, ಅವರ ಮೊಗದಲ್ಲಿ ಎಂಥಾ ನಗು. ಕೆಟ್ಟುಕೆರಹಿಡಿದು ಹೋಗಿರುವ ಐಟಿ ಉದ್ಯಮವೇ, ನೀನು ನನಗೆ ಮಾಡಿರುವುದಾದರೂ ಏನು?" ಸಾಕಲ್ಲ, ಈ ಮಾತಿನ ಹಿಂದಿನ ಮರ್ಮ ಏನೆಂದು ತಿಳಿಯಲು? ಹಾಗೆಯೆ, ಮಗದೊಬ್ಬರು, ಇಷ್ಟೊಂದು ಪ್ರೀತಿಯಿಂದ ಈ ವೃತ್ತಿ ಮಾಡಿ, ಜೀವನ ಸಾಗಿಸುತ್ತಿರುವ ಇವರ ಕಷ್ಟವನ್ನು ವಿದ್ಯಾಬುದ್ಧಿ ಕಲಿಯುತ್ತಿರುವ ಮಕ್ಕಳು ಮರೆಯದಿರಲಿ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+