ಜ್ಞಾನೋದಯವಾಗುವುದು ಎಂದರೆ ಏನು ಗೊತ್ತೇ?
ಕೆಗಾನ್ ಎಂಬ ಝೆನ್ ಗುರುಗಳು ಜ್ಞಾನೋಪದೇಶ ಮಾಡುವುದರಲ್ಲಿ ಹೆಸರುವಾಸಿ. ಅವರಿಗೆ ಇದ್ದ ಶಿಷ್ಯರ ಸಂಖ್ಯೆ ದೊಡ್ಡದು. ಒಂದು ದಿನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದರು. ಅದರಲ್ಲಿ ಒಬ್ಬ ಶಿಷ್ಯನಿಗೆ ಜ್ಞಾನೋದಯದ ಬಗ್ಗೆ ತಿಳಿಯಲು ಬಹಳ ಆಸಕ್ತಿ. ಅಷ್ಟೇ ಅಲ್ಲ, ಆತನಿಗೆ ಅದರ ಬಗ್ಗೆ ಸಂಶಯಗಳಿತ್ತು. ಗುರುಗಳು ಜ್ಞಾನದ ಕುರಿತು ಹೇಳುವಾಗ ಬಹು ಆಸಕ್ತಿಯಿಂದ ಕೇಳುತ್ತಿದ್ದನು.
ಹೀಗೆ ಕೇಳುತ್ತಿರುವಾಗ ಅವನಿಗೆ ಒಂದು ಸಂಶಯ ಮೂಡಿತು, ಜ್ಞಾನೋದಯ ಪಡೆಯುವುದು ಹೇಗೆ? ಒಮ್ಮೆ ಜ್ಞಾನೋದಯ ಪಡೆದ ನಂತರ ಪುನಃ ಆ ವ್ಯಕ್ತಿ ಸಾಮಾನ್ಯ ವ್ಯಕ್ತಿಯಂತೆ ವರ್ತಿಸಲು ಸಾಧ್ಯವೇ?. ಇದಕ್ಕೆ ಗುರುಗಳ ಬಳಿ ಹೇಗೂ ಉತ್ತರವಿರುತ್ತದೆ ಎನ್ನುವುದು ಆತನಿಗೆ ಗೊತ್ತಿತ್ತು. ಸರಿ ಈ ಅನುಮಾನವನ್ನು ಗುರುಗಳ ಹತ್ತಿರ ಕೇಳಿ ಪರಿಹರಿಸಬೇಕೆಂದು ತೀರ್ಮಾನಿಸಿ ಗುರುಗಳ ಸಮೀಪ ಬಂದನು.
"ಗುರುಗಳೇ, ಒಬ್ಬ ವ್ಯಕ್ತಿ ಜ್ಞಾನ ಪಡೆದ ನಂತರ ಸಾಮಾನ್ಯ ವ್ಯಕ್ತಿಯಂತೆ ಬಾಳಲು ಸಾಧ್ಯವೇ?" ಎಂದು ಶಿಷ್ಯ ಕೇಳಿದನು.

ಶಿಷ್ಯನ ಪ್ರಶ್ನೆಗೆ ಮುಗುಳ್ನಕ್ಕ ಗುರುಗಳು "ಒಡೆದು ಚೂರಾದ ಕನ್ನಡಿ ಮತ್ತು ಮರದಿಂದ ಉದುರಿದ ಹೂ ಎಂದೂ ತಮ್ಮ ಮುಂಚಿನ ಸ್ಥಿತಿಗೆ ಬರಲಾರವು" ಎಂದರು. ಗುರುಗಳ ಮಾತನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯ ಅಂದರೆ ಏನು ಅನ್ನುವುದು ಸ್ಪಷ್ಟವಾಗಿ ಅರ್ಥವಾಯಿತು.
ಜ್ಞಾನೋದಯ ಎನ್ನುವುದು ಒಂದು ಘಟ್ಟವಲ್ಲ. ಅದು ವಾಸ್ತವಗಳನ್ನು ಯಾವ ಪ್ರಚೋದನೆ, ಪ್ರಭಾವಗಳಿಲ್ಲದೆ ಅರಿಯುವುದು. ಹಾಗೆ ಅರಿತ ಬಳಿಕ ನಾವು ನಮ್ಮ ಪೂರ್ವ ಜ್ಞಾನಗಳತ್ತ ಹೊರಳುವುದಿಲ್ಲ. ಅದು ವಾಸ್ತವಗಳನ್ನು ಅರಿತುಕೊಂಡಂತೆ, ನಮ್ಮ ಮುಗ್ಧತೆಯನ್ನು ಕಳೆದುಕೊಂಡಂತೆ.
(ಸಂಗ್ರಹ)












Click it and Unblock the Notifications