ದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲು
ಜಪಾನಿನಲ್ಲಿ ಸೈನ್ಯ ಆಂತರಿಕ ಯುದ್ಧಗಳಲ್ಲಿ ತೊಡಗಿತ್ತು. ಯಾವುದಾದರೂ ಊರಿಗೆ ನುಗ್ಗಿದರೆ ಕೈಗೆ ಸಿಕ್ಕವರನ್ನೆಲ್ಲರನ್ನೂ ಕೊಂದು ಇಡೀ ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಒಂದು ಹಳ್ಳಿಯಲ್ಲಿನ ಜನರು ಸೈನ್ಯ ದಾಳಿ ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಮಾಡಿದ್ದರು.
ಎಲ್ಲವನ್ನೂ ದೋಚುವ ಹುಮ್ಮಸ್ಸಿನೊಂದಿಗೆ ಹಳ್ಳಿಗೆ ಆಕ್ರಮಣ ಮಾಡಿದ ಸೈನ್ಯಕ್ಕೆ ಕಂಡಿದ್ದು ಬರಿದಾದ ಮನೆಗಳು, ಮಾರುಕಟ್ಟೆಗಳು. ಆದರೆ ವಿಹಾರವೊಂದರಲ್ಲಿ ವಯಸ್ಸಾದ ಝೆನ್ ಗುರು ಮಾತ್ರ ಉಳಿದಿದ್ದ. ಇಡೀ ಊರು ಖಾಲಿಯಾಗಿದ್ದರೂ ಒಬ್ಬ ಉಳಿದಿರುವುದನ್ನು ಕಂಡ ಸೈನ್ಯದ ದಂಡನಾಯಕನಿಗೆ ಕುತೂಹಲ ಉಂಟಾಯಿತು. ಸೈನ್ಯದ ದಂಡನಾಯಕ ಝೆನ್ ಗುರುವನ್ನು ನೋಡಲು ವಿಹಾರಕ್ಕೆ ಬಂದ.
ದಂಡನಾಯಕನನ್ನು ಕಂಡು ಗುರು ಕೊಂಚವೂ ವಿಚಲಿತನಾಗಲಿಲ್ಲ. ತನ್ನನ್ನು ಕಂಡರೆ ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಮಾತ್ರ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.

"ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತೇ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ" ದಂಡನಾಯಕ ಅಬ್ಬರಿಸಿದ.
ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, "ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ."












Click it and Unblock the Notifications